ಮಂಜೇಶ್ವರ: ಹೊಸಂಗಡಿಯ ಸುರಕ್ಷಾ ದಂತ ಚಿಕಿತ್ಸಾಲಯದ 22ನೇ ವಾರ್ಷಿಕೋತ್ಸವದ ಅಂಗವಾಗಿ ಚೂಂತಾರು ಸರೋಜಿನ ಭಟ್ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಜರಗಿತು.
ಖ್ಯಾತ ಪರಿಸರವಾದಿ ಮತ್ತು ಅರಣ್ಯ ಮಿತ್ರ ಪ್ರಶಸ್ತಿ ವಿಜೇತ ಮಾಧವ ಉಳ್ಳಾಳ್ ಅವರು ಹೊಸಂಗಡಿಯ ಹಿರಿಯ ವಕೀಲರು ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ದಾಮೋದರ ಶೆಟ್ಟಿ ಅವರಿಗೆ ಗಿಡ ಹಸ್ತಾಂತರಿಸುವ ಮೂಲಕ ವನಮಹೋತ್ಸವವನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ಪ್ರತಿಯೊಬ್ಬರು ಪರಿಸರ ಪ್ರಜ್ಞೆ ಬೆಳೆಸಿಕೊಂಡು ಗಿಡ ನೆಟ್ಟು, ಮರ ಬೆಳೆಸಿ ಉತ್ತಮ ಪರಿಸರ ನಿರ್ಮಾಣ ಮಾಡಿದ್ದಲ್ಲಿ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಮಾಧವ ಉಳ್ಳಾಳ್ ಅಭಿಪ್ರಾಯಪಟ್ಟರು.
ದಾಮೋದರ ಶೆಟ್ಟಿ ಅವರು ಮಾತನಾಡಿ ಸುರಕ್ಷಾ ದಂತ ಚಿಕಿತ್ಸಾಲಯ ಕೇವಲ ದಂತ ಚಿಕಿತ್ಸೆಗೆ ಸೀಮಿತವಾಗದೆ ವನಮಹೋತ್ಸವ, ಬಾಯಿ ಕ್ಯಾನ್ಸರ್, ತಪಾಸಣೆ ಶಿಬಿರ, ರಕ್ತದಾನ ಶಿಬಿರ ಹೀಗೆ ಹತ್ತು ಹಲವಾರು ಸಮಾಜಮುಖಿ ಕಾರ್ಯಕ್ರಮ ಆಯೋಜನೆ ಮಾಡಿ ಜನ ಮಾನಸದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಡಾ.ಚೂಂತಾರು ದಂತ ದಂಪತಿಗಳ ಪರಿಸರ ಪ್ರಜ್ಞೆ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದರು.
ಸುರಕ್ಷಾ ದಂತ ಚಿಕಿತ್ಸಾಲಯದ ಡಾ.ಮುರಲೀಮೋಹನ್ ಚೂಂತಾರು, ಡಾ.ರಾಜಶ್ರೀ ಮೋಹನ್, ಸಹಾಯಕಿಯರಾದ ರಮ್ಯ, ವಾಣಿ, ರೋಹಿಣಿ, ಯಶಶ್ವಿನಿ ಮತ್ತು ರಶ್ಮಿ ಉಪಸ್ಥಿತರಿದ್ದರು. ಜುಲೈ 31 ರ ವರೆಗೆ ಸುರಕ್ಷಾ ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡುವ ಎಲ್ಲಾ ರೋಗಿಗಳಿಗೆ ಉಚಿತವಾಗಿ ಗಿಡ ನೀಡಲಾಗುವುದು ಎಂದು ಡಾ.ಮುರಲೀಮೋಹನ್ ಚೂಂತಾರು ಅವರು ತಿಳಿಸಿದ್ದಾರೆ. ಜುಲೈ 3 ರಂದು ಸುಮಾರು 60 ಗಿಡಗಳನ್ನು ವಿತರಿಸಲಾಯಿತು.


