ಬದಿಯಡ್ಕ: ಯಕ್ಷಗಾನ ಪ್ರಕಾರದಲ್ಲಿ ಬಣ್ಣದ ವೇಷವೆಂದು ಕರೆಯಲ್ಪಡುವ ರಾಕ್ಷಸ ಮತ್ತು ರಾಕ್ಷಸ ಗುಣಗಳನ್ನು ಹೊಂದಿರುವ ಪಾತ್ರಗಳಿಗೆ ವಿಶೇಷವಾದ ಸ್ಥಾನವಿದೆ. ಸಾಂಪ್ರದಾಯಿಕ ಯಕ್ಷಗಾನ ಬಯಲಾಟವು ಬಣ್ಣದ ವೇಷವೊಂದರ ಹೊರತು ಅಪೂರ್ಣವೆನ್ನುವುದು ಸಾರ್ವತ್ರಿಕ ಅಭಿಪ್ರಾಯ.
ಇಂತಹ ಬಣ್ಣದ ವೇಷಗಳಲ್ಲಿ ಸರಿಸುಮಾರು ಏಳು ದಶಕಗಳ ಕಾಲ ಮಿಂಚಿದ ಅದ್ಫುತ ಕಲಾವಿದ ದಿ. ಬಣ್ಣದ ಮಹಾಲಿಂಗ ಸಂಪಾಜೆಯವರು. ಅವರ ನೆನಪಿನಲ್ಲಿ 2017ರಲ್ಲಿ ಪುತ್ತೂರನ್ನು ಕೇಂದ್ರವಾಗಿರಿಸಿ ಸ್ಥಾಪಿಸಲ್ಟಟ್ಟ ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಮೂರನೆಯ ವರ್ಷದ ಕಾರ್ಯಕ್ರಮವು ಅ. 10 ರಂದು ಭಾನುವಾರ ಅಪರಾಹ್ನ
2. ರಿಂದ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಹಯರ್ ಸೆಕೆಂಡರಿ ಶಾಲಾ ಸಭಾಂಗಣದಲ್ಲಿ ನೆರವೇರಲಿರುವುದು.
ಅಪರಾಹ್ಣ 2. ಗಂಟೆಗೆ ಶೂರ್ಪನಖಾ - ಖರಾಸುರ ಪ್ರಸಂಗದ ಯಕ್ಷಗಾನ ಬಯಲಾಟದೊಂದಿಗೆ ಕಾರ್ಯಕ್ರಮ ಆರಂಭವಾಗುವುದು. ಸಂಜೆ 5. ರಿಂದ ಪ್ರತಿಷ್ಠಾನದ ಅಧ್ಯಕ್ಷ
ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಹಿರಿಯ ಯಕ್ಷಗಾನ ಕಲಾವಿದರೂ ಬಣ್ಣದ ಮಹಾಲಿಂಗರ ಒಡನಾಡಿಗಳೂ ಆದ ಡಾ. ಕೋಳ್ಯೂರು ರಾಮಚಂದ್ರ ರಾವ್ ಉದ್ಘಾಟಿಸುವರು. ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರೂ ಹಿರಿಯ ಸಾಹಿತಿಗಳೂ ಆದ ಡಾ. ಚಂದ್ರಶೇಖರ
ದಾಮ್ಲೆ ಬಣ್ಣದ ಮಹಾಲಿಂಗರ ಸಂಸ್ಮರಣೆಯನ್ನು ಮಾಡುವರು. ಮುಖ್ಯ ಅತಿಥಿಗಳಾಗಿ ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ. ಎನ್. ಕೃಷ್ಣ ಭಟ್, ಮತ್ತು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ವಿದ್ಯಾಸಂಸ್ಥೆಯ ಪ್ರಬಂಧಕ ಜಯದೇವ ಖಂಡಿಗೆ ಉಪಸ್ಥಿತರಿರುವರು. ಸಮಾರಂಭದಲ್ಲಿ ಬಣ್ಣದ ಮಹಾಲಿಂಗ ಯಕ್ಷ ಪ್ರಶಸ್ತಿಯನ್ನು ತೆಂಕುತಿಟ್ಟಿನ ಸುಪ್ರಸಿದ್ಧ ಹಿರಿಯ ಬಣ್ಣದ ವೇಷಧಾರಿ ಮಕರ್ಂಜ ಬೊಮ್ಮಾರು ಐತಪ್ಪ ಗೌಡರಿಗೆ ಪ್ರದಾನ ಮಾಡಲಾಗುವುದು. ರಾಷ್ಟ್ರೀಯ ರಂಗ ಪ್ರಶಸ್ತಿ ವಿಜೇತ ರಂಗನಿರ್ದೇಶಕ, ರಂಗ ಮಾಂತ್ರಿಕ ಜೀವನ್ ರಾಮ್ ಸುಳ್ಯರವರಿಗೆ ಬಣ್ಣದ ಮಹಾಲಿಂಗರ ಶಾಶ್ವತ ನೆನಪನ್ನು ಉಳಿಸುವಲ್ಲಿ ಸಹಕರಿಸಿದ ಮಹಾನುಭಾವರಿಗೆ ನೀಡುವ ಬಣ್ಣದ ಮಹಾಲಿಂಗ ಸ್ಮೃತಿ ಪುರಸ್ಕಾರವನ್ನು ನೀಡಲಾಗುವುದು. ಇದೇ ಸಂದರ್ಭದಲ್ಲಿ ತೆಂಕುತಿಟ್ಟಿನ ಹಿರಿಯ ನಿವೃತ್ತ ಕಲಾವಿದ ಸರವು ತೇರಪ್ಪ ಪಾಟಾಳಿಯವರನ್ನು ಸನ್ಮಾನಿಸಲಾಗುವುದು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ, ಯಕ್ಷಗಾನ, ನಾಟಕ ಕಲಾವಿದ ಯತೀಶ್ ಕುಮಾರ್ ರೈ ಅಭಿನಂದನಾ ಭಾಷಣ ಮಾಡುವರು. ಪ್ರತಿಷ್ಠಾನದ ಗೌರವಾಧ್ಯಕ್ಷರುಗಳಾದ ಸುಬ್ರಾಯ ಸಂಪಾಜೆ ಮತ್ತು ನಿವೃತ್ತ ಉಪತಹಶೀಲ್ದಾರ್ ಮಹಾಲಿಂಗ ಮಂಗಳೂರು ಉಪಸ್ಥಿತರಿರುವರು. 6.30 ರಿಂದ ಪರಂಪರೆಯ ಮೇಳೈಸುವಿಕೆಯೊಂದಿಗೆ ತೆಂಕುತಿಟ್ಟು ಯಕ್ಷ ಪರಂಪರೆಯ ಹರಿಕಾರ ಬಲಿಪ ಪ್ರಸಾದ ಮತ್ತು ಸಿರಿಬಾಗಿಲು ರಾಮಕೃಷ್ಣ ಮಯ್ಯರ ಸಾರಥ್ಯದಲ್ಲಿ ಸುಪ್ರಸಿದ್ಧ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರ ಕೂಡುವಿಕೆಯಿಂದ ಮಹಿರಾವಣ ಕಾಳಗ ಯಕ್ಷಗಾನ ಬಯಲಾಟ ನಡೆಯಲಿದೆ. ಯಕ್ಷಗಾನದ ಬಣ್ಣದ ವೇಷ ಮತ್ತು ಪರಂಪರೆಗೆ ಹೆಚ್ಚಿನ ಒತ್ತು ಕೊಟ್ಟು ಆಯೋಜಿಸಲಾದ ಈ ಕಾರ್ಯಕ್ರಮಗಳು ಅನೇಕ ಪ್ರತ್ಯೇಕತೆಗಳೊಂದಿಗೆ ವೈಶಿಷ್ಟ್ಯಪೂರ್ಣವಾಗಿ, ಬಣ್ಣದ ಮಹಾಲಿಂಗರ ವ್ಯಕ್ತಿತ್ವದ ಅನಾವರಣಕ್ಕೆ ಪೂರಕವಾಗಿ ನಡೆಯಲಿವೆ. ಈ ಮೂಲಕ ರಂಗದ ದಿಗ್ಗಜರೊಬ್ಬರ ಔಚಿತ್ಯಪೂರ್ಣ ಸಂಸ್ಮರಣೆಯು ಸಾಂಸ್ಕøತಿಕ ನೆಲ ನೀರ್ಚಾಲಿನಲ್ಲಿ ಸಂಪನ್ನಗೊಳ್ಳಲಿದೆ.