ಬದಿಯಡ್ಕ: ಮಲೆಯಾಳಿ ಮಣ್ಣಿನ ಓಣಂ ಹಬ್ಬವನ್ನು ತೆಲುಗರ ನಾಡಿನಲ್ಲಿ ಆಚರಿಸುವ ಮೂಲಕ ಇದರ ಮಹತ್ವವನ್ನು ಅಲ್ಲಿನ ವಿದ್ಯಾರ್ಥಿ ಗಳಿಗೆ ಬೋಧಿಸಿ ಉತ್ಸಾಹವನ್ನು ಮೂಡಿಸುವಲ್ಲಿ ಇಲ್ಲೊಬ್ಬರು ಶಿಕ್ಷಕರು ಗಮನ ಸೆಳೆದಿದ್ದಾರೆ.
ಆಂದ್ರಪ್ರದೇಶದ ಗಿಡಲೂರು ಶ್ರೀಸಾಯಿ ಇಂಟರ್ನೇಶನಲ್ ಟೆಕ್ನೋ ಸ್ಕೂಲ್ ನಲ್ಲಿ ಇದೇ ಪ್ರಥಮ ಬಾರಿಗೆ ಹೀಗೊಂದು ವಿಶೇಷ ಆಚರಣೆಯನ್ನು ಆಯೋಜಿಸಿದವರು ಮೂಲತಃ ಕಾಸರಗೋಡು ಜಿಲ್ಲೆಯ ನೀರ್ಚಾಲು ಸಮೀಪದ ಕನ್ನೆಪ್ಪಾಡಿಯ ಕಿಶೋರ್ ಕುಮಾರ್ ಎಂಬವರು. ಪೂರ್ತಿ ತೆಲುಗರಿಂದಲೇ ಕೂಡಿದ್ದ ಈ ಶಾಲೆಯಲ್ಲಿ ಓಣಂ ಆಚರಣೆ ಅಲ್ಲಿದ್ದವರಿಗೆ ವಿಶಿಷ್ಟ ಅನುಭೂತಿ ಮೂಡಿಸಿತಂತೆ. ಕಳೆದ ಏಳೆಂಟು ವರ್ಷಗಳಿಂದ ಈ ಶಾಲೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಕಿಶೋರ್ ಕುಮಾರ್ ಪ್ರತಿ ವರ್ಷವೂ ಏನಾದರೊಂದು ವಿಶೇಷತೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವಲ್ಲಿ ಮುಂದಾಳುತ್ವ ವಹಿಸುತ್ತಾರೆ. ಈ ಹಿಂದೆ ತೆಲುಗು ಮಕ್ಕಳಿಗೆ ಕನ್ನಡ ಕಲಿಕೆ ಹಾಗೂ ಕಳೆದ ವರ್ಷ ಮಲೆಯಾಳಂ ಭಾಷೆಯ ಪ್ರಾಥಮಿಕ ತರಬೇತಿ ಅಭಿಯಾನ ನಡೆಸಿದ್ದರು. ತೆಲುಗಿನ ಮಕ್ಕಳಿಗೆ ಕರ್ನಾಟಕ, ಕೇರಳ ಪ್ರದೇಶವನ್ನು ಸಂದರ್ಶಿಸಿದ ಸಂದರ್ಭದಲ್ಲಿ ಭಾಷಾ ಸಂವಹನ ಹಾಗೂ ಬಸ್ ಗಲ ಬೋರ್ಡ್ ಓದಲು ಸಹಕಾರಿಯಾಗುವ ನಿಟ್ಟಿನಲ್ಲಿ ಈ ಯಶಸ್ವಿ ಅಭಿಯಾನ ನಡೆಸಲಾಗಿತ್ತು ಎಂದವರು ತಿಳಿಸಿರುವರು. ಜೊತೆಗೆ ಮಧುರ ಗಾಯನಕಾರರಾಗಿ ಸಿದ್ದಿಹೊಂದಿರುವ ಕಿಶೋರ್ ಕುಮಾರ್ ಅವರು ಈ ಹಿಂದೆ ಕಾಸರಗೋಡು ಜಿಲ್ಲೆಯ ಯುವ ಪ್ರತಿಭಾವಂತ ಗಾಯಕರಾಗಿ ಗುರುತಿಸಿಕೊಂಡವರಾಗಿದ್ದಾರೆ. ಅವರ ಭಾವಗೀತೆ, ಜಾನಪದ ಗೀತೆಗಳು ಹೆಚ್ಚು ಜನಪ್ರಿಯತೆಗಳಿಸಿತ್ತು. ವಷರ್ಂಪ್ರತಿ ಈ ಶಾಲೆಯಲ್ಲಿ ರಾಷ್ಟ್ರೀಯ ಆಚರಣೆಗಳನ್ನು ಆಚರಿಸಲಾಗುತ್ತಿದ್ದು ಈ ಬಾರಿ ಆಡಳಿತ ಮಂಡಳಿಯ ಸಹಕಾರದಿಂದ ಓಣಂ ಆಚರಿಸಿರುವುದು ವಿಶೇಷತೆಯಾಗಿದೆ.


