ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ವತಿಯಿಂದ ಅರ್ಹ ಫಲಾನುಭವಿಗಳಾದ ಕ್ಷೀರೋತ್ಪಾದಕರಿಗೆ ಸಬ್ಸಿಡಿ ರೂಪದಲ್ಲಿ ನೀಡಲಾಗುವ ಪಶು ಆಹಾರದ ವಿತರಣೆಯನ್ನು ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಶನಿವಾರ ಉದ್ಘಾಟಿಸಿದರು.
ಶನಿವಾರ ಬದಿಯಡ್ಕ ಕ್ಷೀರೋತ್ಪಾದಕ ಸಹಕಾರಿ ಸಂಘದ ವಠಾರದಲ್ಲಿ ಜರಗಿದ ವಿತರಣಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿ, ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳವಾಗಬೇಕಾದರೆ ಹೆಚ್ಚು ಹೆಚ್ಚು ರೈತರು ದನಸಾಕಣೆಯಲ್ಲಿ ತೊಡಗಿಕೊಳ್ಳುವಂತಾಗಬೇಕು. ಸ್ವ ಉದ್ಯೋಗದ ಮೂಲಕ ಜನರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಗ್ರಾಮಪಂಚಾಯಿತಿಯು ಹಮ್ಮಿಕೊಂಡ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಅವರು ತಿಳಿಸಿದರು.
ನೀರ್ಚಾಲು, ಬದಿಯಡ್ಕ ಹಾಗೂ ಪಳ್ಳತ್ತಡ್ಕ ಕ್ಷೀರೋತ್ಪಾದ ಸಹಕಾರಿ ಸಂಘಗಳ ವ್ಯಾಪ್ತಿಯಲ್ಲಿ ಬರುವ 172 ಮಂದಿ ಫಲಾನುಭವಿಗಳಿಗೆ ಪಶು ಆಹಾರ ವಿತರಿಸಲಾಗುವುದು. ಯೋಜನೆಯಂತೆ 8 ಲಕ್ಷ ರೂಪಾಯಿ ಮೊತ್ತವನ್ನು ಸಬ್ಸಿಡಿ ರೂಪದಲ್ಲಿ ನೀಡಲು ಮೀಸಲಿಡಲಾಗಿದೆ. ಬದಿಯಡ್ಕ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಸೈಬುನ್ನೀಸ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಅಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷ ಅನ್ವರ್, ಸದಸ್ಯರುಗಳಾದ ಡಿ.ಶಂಕರ, ವಿಶ್ವನಾಥ ಪ್ರಭು ಕರಿಂಬಿಲ, ಪ್ರೇಮ, ಬದಿಯಡ್ಕ ಪಶುವೈದ್ಯಕೀಯ ಆಸ್ಪತ್ರೆಯ ಡಾ.ಚಂದ್ರಬಾಬು ಶುಭಹಾರೈಸಿದರು.

