ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಜತೆಗೆ ಕ್ಷೇತ್ರದ ನಾನಾ ಕಡೆ ನಡೆದುಬರುತ್ತಿರುವ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ಅಗತ್ಯಕ್ರಮ ಕೈಗೊಳ್ಳುವುದಾಗಿ ನೂತನ ಶಾಸಕ ಎಂ.ಸಿ ಕಮರುದ್ದೀನ್ ತಿಳಿಸಿದ್ದಾರೆ. ಅವರು ಕಾಸರಗೋಡು ಪ್ರೆಸ್ಕ್ಲಬ್ ಶನಿವಾರ ಆಯೋಜಿಸಿದ್ದ ಮೀಟ್ ದಿ ಪ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಂಜೇಶ್ವರ ಕ್ಷೇತ್ರದಲ್ಲಿ ಈ ಹಿಂದೆ ಆಯ್ಕೆಯಾದ ಶಾಸಕರು ಹಲವಾರು ಅಭಿವೃದ್ಧಿಕಾರ್ಯಗಳನ್ನು ಕೈಗೊಂಡಿದ್ದು, ಇದನ್ನು ಮುಂದುವರಿಸಿಕೊಂಡುಹೋಗುವುದು ಆದ್ಯ ಕರ್ತವ್ಯ. ಈ ಪ್ರದೇಶದಲ್ಲಿ ಕೆಲವೊಂದು ಅಹಿತಕರ ಘಟನೆಗಳಲ್ಲಿ ಶಾಮೀಲಾಗುತ್ತಿರುವವರು ಸುಲಭವಾಗಿ ನೆರೆಯ ದ.ಕ ಜಿಲ್ಲೆಗೆ ತೆರಳಿ ತಲೆಮರೆಸಿಕೊಳ್ಳುತ್ತಿರುವುದು ಆತಂಕಕಾರಿ. ಮಂಜೇಶ್ವರ ತಾಲೂಕಿಗೆ ಸುಸಜ್ಜಿತ ಕಟ್ಟಡ ಸಮುಚ್ಛಯ, ಮಂಜೇಶ್ವರ ಬಂದರಿನ ಪೂರ್ತೀಕರಣ, ಪ್ರಸಕ್ತ ಜಾರಿಯಲ್ಲಿರುವ ಹಲವು ಅಕಾಡಮಿಗಳನ್ನು ಜನರಿಗೆ ಉಪಕಾರಪ್ರದವನ್ನಾಗಿಸುವುದು, ಭಾಷಾ ಅಲ್ಪಸಂಖ್ಯಾತರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವುದರ ಜತೆಗೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ, ಸಮುದ್ರಕೊರೆತ ತಡೆಗೆ ಅಗತ್ಯ ಕ್ರಮ ಜತೆಗೆ ಸಂಕಷ್ಟಕ್ಕೀಡಾದವರಿಗೆ ಅಗತ್ಯಪರಿಹಾರ ಒದಗಿಸಿಕೊಡುವ ಬಗ್ಗೆ ವಿಧಾನಸಭೆಯಲ್ಲಿ ಧ್ವನಿಯೆತ್ತುವುದಾಗಿ ತಿಳಿಸಿದರು.
ಒಂದುವರೆ ವರ್ಷ ಕಾಲಾವಧಿಯ ಶಾಸಕತ್ವದಲ್ಲಿ ನಿರೀಕ್ಷಿತ ಕೆಲಸ ಅಸಾಧ್ಯ ಎಂಬುದು ಮನಗಂಡಿದ್ದರೂ, ಇದಕ್ಕಾಗಿ ಬದಲಿ ಫಂಡ್ ಗೊತ್ತುಪಡಿಸಬೇಕಾದ ಅನಿವಾರ್ಯತೆಯಿದೆ.
ಐಕ್ಯರಂಗದ ಗೆಲುವಿನ ಬಗ್ಗೆ ಜಾತ್ಯತೀತ ನಿಲುವಿನ ಸೋಲು ಎಂಬ ಸಿಪಿಎಂ ಹೇಳಿಕೆ ವಿಷಾದನೀಯ.ಐಕ್ಯರಂಗದ ಗೆಲುವು ಜಾತ್ಯತೀತ ನಿಲುವಿಗೆ ಲಭಿಸಿದ ಅಂಗೀಕಾರವಾಗಿದೆ ಎಂದು ಅಭಿಪ್ರಾಯಪಟ್ಟರು. ಬಿಜೆಪಿ ಗೆಲವಿನ ಬಗ್ಗೆ ಸಿಪಿಎಂ ಹೆಚ್ಚಿನ ಆಶಾಭಾವನೆ ಹೊಂದಿತ್ತು, ತನ್ನ ಸೋಲಿಗೆ ಸಿಪಿಎಂ ಶತಾಯಗತಾಯ ಪ್ರಯತ್ನಿಸಿದ್ದು, ಇದಕ್ಕಾಗಿ ತನ್ನದೇ ಹೆಸರಿನ ಬೇರೊಬ್ಬ ಅಭ್ಯರ್ಥಿಯನ್ನೂ ಕಣಕ್ಕಿಳಿಸಿದ್ದರೂ, ಕ್ಷೇತ್ರದ ಮತದಾರರು, ಇವೆಲ್ಲವನ್ನೂ ತಿರಸ್ಕರಿಸಿ ಐಕ್ಯರಂಗವನ್ನು ಬೆಂಬಲಿಸಿದ್ದಾರೆ ಎಂದು ತಿಳಿಸಿದರು.
ಪ್ರೆಸ್ಕ್ಲಬ್ ಅಧ್ಯಕ್ಷ ಟಿ.ಎ ಶಾಫಿ ಅಧ್ಯಕ್ಷತೆ ವಹಿಸಿದ್ದರು. ಎ. ಅಬ್ದುಲ್ರಹಮಾನ್, ಎಂ. ಅಬ್ಬಾಸ್ ಉಪಸ್ಥಿತರಿದ್ದರು. ರವೀಂದ್ರನ್ ರಾವಣೇಶ್ವರ ಸ್ವಾಗತಿಸಿ, ವಂದಿಸಿದರು.

