ನವದೆಹಲಿ: ಕೇಂದ್ರ ಸರಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದಿಲ್ಲಿ ಗಡಿಭಾಗಗಳಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಇಂದು 100 ದಿನಗಳು ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ದಿಲ್ಲಿ ಹೊರಭಾಗದಲ್ಲಿರುವ ಆರು ಲೇನ್ ಗಳ ಎಕ್ಸ್ ಪ್ರೆಸ್ ವೇಯನ್ನು ತಡೆದು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು.
ಕಳೆದ ವರ್ಷ ನವೆಂಬರ್ 25ರಂದು ಆರಂಭವಾದ ರೈತರ ಪ್ರತಿಭಟನೆ ಶನಿವಾರ 100 ದಿನ ಪೂರೈಸಿದ ಕಾರಣಕ್ಕೆ ಮುಂದಿನ ಕೆಲವು ದಿನಗಳ ಕಾಲ ಹಲವು ಚಟುವಟಿಕೆಗಳನ್ನು ನಡೆಸಲು ರೈತರು ಯೋಜಿಸಿದ್ದಾರೆ. ಇದರಲ್ಲಿ ಮಾ.8ರಂದು ನಡೆಯುವ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯು ಸೇರಿದೆ. ಈ ದಿನ ರೈತ ಮಹಿಳೆಯರು ಪ್ರತಿಭಟನೆ ನೇತೃತ್ವವಹಿಸಲಿದ್ದಾರೆ.
2020ರ ಸೆಪ್ಟಂಬರ್ ನಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಇಂದು ಸಂಯುಕ್ತ ಕಿಸಾನ್ ಮೋರ್ಚಾ(ಎಸ್ಕೆಎಂ)ದೇಶಾದ್ಯಂತ ಬೆಳಗ್ಗೆ 11ರಿಂದ 3 ರ ತನಕ ಐದು ಗಂಟೆಗಳ ಹೆದ್ದಾರಿ ಬಂದ್ಗೆ(ಚಕ್ಕಾ ಜಾಮ್)ಕರೆ ನೀಡಿತ್ತು. ಯುವ ಹಾಗೂ ವೃದ್ದ ರೈತರುಗಳು ಕಾರುಗಳು, ಟ್ರಕ್ ಗಳು ಹಾಗೂ ಟ್ರ್ಯಾಕ್ಟರ್ ಗಳ ಮೂಲಕ ಹೆದ್ದಾರಿಯತ್ತ ಸಾಗಿಬಂದಿದ್ದಾರೆ.
ಕೃಷಿ ಕಾಯ್ದೆಗಳು ದೇಶದ ಕೃಷಿ ಕಾಯ್ದೆಗಳ ಸುಧಾರಣೆಗೆ ಅಗತ್ಯವಿದ್ದು, ಪ್ರತಿಭಟನಕಾರರು ರಾಜಕೀಯವಾಗಿ ಪ್ರಚೋದಿತರಾಗಿದ್ದಾರೆ ಎಂದು ಮೋದಿ ಹೇಳಿದ್ದರು.
'ಮೋದಿ ಸರಕಾರವು ಈ ಪ್ರತಿಭಟನಾ ಚಳವಳಿಯನ್ನು ಪ್ರತಿಷ್ಠೆಯ ವಿಚಾರವನ್ನಾಗಿಸಿದೆ. ಸರಕಾರವು ರೈತರ ನೋವನ್ನು ನೋಡಲು ಸಿದ್ಧವಿಲ್ಲ. ನಮಗೆ ಪ್ರತಿಭಟನೆ ಅಲ್ಲದೆ ಬೇರೆ ಏನೂ ಆಯ್ಕೆ ನೀಡಿಲ್ಲ'' ಎಂದು ಪಂಜಾಬ್ ರಾಜ್ಯದ 68ರ ವಯಸ್ಸಿನ ರೈತ ಅಮರ್ಜೀತ್ ಸಿಂಗ್ ಹೇಳಿದ್ದಾರೆ.
ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಹಲವು ರಾಜ್ಯಗಳ ಸಾವಿರಾರು ರೈತರು ಡಿಸೆಂಬರ್ ನ ಮೈಕೊರೆಯುವ ಚಳಿಯ ನಡುವೆ ದಿಲ್ಲಿ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ರೈತರ ಚಳವಳಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು. ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್ ಬರ್ಗ್ ಹಾಗೂ ಅಮೆರಿಕದ ಗಾಯಕಿ ರಿಹಾನ್ನಾ ಬೆಂಬಲ ವ್ಯಕ್ತಪಡಿಸಿದ್ದರು.