ನವದೆಹಲಿ: ಕೇಂದ್ರ ಸರಕಾರವು ತನ್ನ ಆರ್ಥಿಕತೆಯನ್ನು ಉತ್ತಮಗೊಳಿಸಲು ಹಾಗೂ ಬಜೆಟ್ ಕೊರತೆಯನ್ನು ನೀಗಿಸಲು ಮುಂದಿನ ನಾಲ್ಕು ವರ್ಷಗಳಲ್ಲಿ ಸರಕಾರಿ ಒಡೆತನದ ಹಲವಾರು ಸೊತ್ತುಗಳು ಹಾಗೂ ಸ್ವಾಮ್ಯಗಳನ್ನು ಮಾರಾಟ ಮಾಡಿ ರೂ. 6 ದಶಕೋಟಿ ಸಂಗ್ರಹಿಸುವ ಗುರಿ ಹೊಂದಿದೆ ಎಂದು ndtv.com ವರದಿ ಮಾಡಿದೆ.
ಯೋಜನೆಯನ್ವಯ ರಸ್ತೆ, ರೈಲ್ವೆ ಸೊತ್ತುಗಳು, ವಿಮಾನ ನಿಲ್ದಾಣಗಳು, ವಿದ್ಯುತ್ ಸರಬರಾಜು ತಂತಿಗಳು, ಗ್ಯಾಸ್ ಪೈಪ್ ಲೈನ್ಗಳ ಮಾರಾಟ ಸೇರಿವೆ ಎಂದು ಮೂಲಗಳು ತಿಳಿಸಿವೆ. ಈ ಕುರಿತ ಸ್ಪಷ್ಟ ಮಾಹಿತಿಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂದಿನ ಸೋಮವಾರ ನೀಡಲಿದ್ದಾರೆಂಬ ಮಾಹಿತಿಯಿದೆ.
ಪ್ರಧಾನಿ ನರೇಂದ್ರ ಮೋದಿಯ ಪ್ರಮುಖ ಬಂಡವಾಳ ಹಿಂತೆಗೆತ ಅಥವಾ ಡೈವೆಸ್ಟ್ಮೆಂಟ್ ನೀತಿಯನ್ವಯ ಸರಕಾರ ಕೇವಲ ಕೆಲವೇ ಗುರುತಿಸಲಾದ ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡು ಉಳಿದವುಗಳನ್ನು ಖಾಸಗೀಕರಣಗೊಳಿಸಲಿದೆ.
ಈ ಯೋಜನೆಯನ್ವಯ ಈ ವರ್ಷ ಎಲ್ಐಸಿ ಐಪಿಒ ಆಫರ್ ಮಾಡಲಿದ್ದರೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಏರ್ ಇಂಡಿಯಾ ಲಿ. ಇವುಗಳ ಮಾರಾಟ ಈ ವರ್ಷ ನಡೆಯುವ ನಿರೀಕ್ಷೆಯಿದೆ.
ರಸ್ತೆಗಳ ಮಾರಾಟದಿಂದ ರೂ 1.6 ದಶಕೋಟಿ, ರೈಲ್ವೆ ಸ್ವತ್ತುಗಳ ಮಾರಾಟದಿಂದ ರೂ 1.5 ದಶಕೋಟಿ, ವಿದ್ಯುತ್ ಕ್ಷೇತ್ರದ ಸ್ವತ್ತುಗಳ ಮಾರಾಟದಿಂದ ರೂ 1 ದಶಕೋಟಿ, ಗ್ಯಾಸ್ ಪೈಪ್ಲೈನ್ಗಳ ಮಾರಾಟದಿಂದ ರೂ 590 ಬಿಲಿಯನ್ ಹಾಗೂ ದೂರಸಂವಹನ ಕ್ಷೇತ್ರದ ಸ್ವತ್ತುಗಳ ಮಾರಾಟದಿಂದ ರೂ 400 ಬಿಲಿಯನ್ ಸಂಗ್ರಹಿಸುವ ಗುರಿಯನ್ನು ಸರಕಾರ ಹೊಂದಿದೆ ಎಂದು ವರದಿ ತಿಳಿಸಿದೆ.