ಕೊಟ್ಟಾಯಂ: ಕೇರಳಾದ್ಯಂತ ಹಾವುಗಳನ್ನು ಸೆರೆಹಿಡಿಯುವ ಮೂಲಕ ಮನೆಮಾತಾಗಿರುವ ಉರಗಪ್ರಿಯ, ವಾವ ಸುರೇಶ್ ನಾಗರಹಾವಿನ ಕಡಿತಕ್ಕೀಡಾಗಿ ಕೋಟ್ಟಾಯಂ ವೈದ್ಯಕೀಯ ಕಾಲೇಜು ಅಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ಕೋಟ್ಟಾಯಂನಲ್ಲಿ ನಾಗರ ಹಾವು ಸೆರೆ ಹಿಡಿಯುವ ವೇಳೆ ಇವರ ಕಾಲಿಗೆ ಕಡಿದಿತ್ತು. ಹಾವನ್ನು ಚೀಲದೊಳಗೆ ಸೇರಿಸುವ ಯತ್ನದಲ್ಲಿದ್ದಾಗ ಇವರ ಕಾಲಿಗೆ ಕಡಿದಿದೆ. ಕಡಿದ ಹಾವನ್ನು ಬಲವಂತವಾಗಿ ಎಳೆದು ತೆಗೆಯುತ್ತಿದ್ದಂತೆ ಕೈಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದಾಗ ಮತ್ತೆ ಸೆರೆ ಹಿಡಿದು ಚೀಲದೊಳಗೆ ಸೇರಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಹಾವು ಕಡಿದಲ್ಲಿ ಕೈಗೊಳ್ಳಬೇಕಾದ ಪ್ರಾಥಮಿಕ ಚಿಕಿತ್ಸೆಯ ಬಗ್ಗೆ ಸ್ಥಳದಲ್ಲಿದ್ದ ಜನರಿಗೆ ಮಾಹಿತಿ ನೀಡಿದ್ದ ವಾವ ಸುರೇಶ್ ಕುಸಿದು ಬಿದ್ದಿದ್ದರು. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಂದಿನ 48ತಾಸುಗಳು ವಾವ ಸುರೇಶ್ ಅವರ ಪಾಲಿಗೆ ನಿರ್ಣಾಯಕವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ಆಸ್ಪತ್ರೆ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.