ಬದಿಯಡ್ಕ: ಸೂರಿಲ್ಲದ ಅನೇಕರಿಗೆ ಸೂರನ್ನು ನೀಡಿ ನಾಡಿನ ಜನರ ಮನದಲ್ಲಿ ಸದಾ ನೆಲೆಯಾದ ಮಹಾದಾನಿ ಸಾಯಿರಾಂ ಭಟ್ ಬಡವರ ಪಾಲಿಗೆ ಪ್ರತ್ಯಕ್ಷ ದೇವರಾಗಿ ತಮ್ಮ ಹೆಸರನ್ನು ಶಾಶ್ವತವಾಗಿ ಉಳಿಸಿಕೊಂಡಿದ್ದಾರೆ. ಅಂತಹ ಶುದ್ಧ ಮನಸ್ಸುಳ್ಳ ಇನ್ನಷ್ಟು ಜನರು ಇಂತಹ ಕೆಲಸಗಳನ್ನು ಮಾಡುವಂತಾಗಬೇಕು. ತನ್ಮೂಲಕ ನಾಡಿನ ಜನತೆಗೆ ನೆರವಾಗಬೇಕು ಎಂದು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಹೇಳಿದರು.
ಕೊಡುಗೈದಾನಿ ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ ಅವರಿಗೆ ಗುರುವಾರ ಕಿಳಿಂಗಾರು ಸಾಯಿಮಂದಿರದಲ್ಲಿ ಜರಗಿದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಮಾತನಾಡಿದರು.
ಬದಿಯಡ್ಕ ಗ್ರಾಪಂ ಉಪಾಧ್ಯಕ್ಷ ಅಬ್ಬಾಸ್, ಸದಸ್ಯ ಡಿ.ಶಂಕರ, ಬದಿಯಡ್ಕ ಗ್ರಾಪಂ ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್ ಮೊದಲಾದವರು ಉಪಸ್ಥಿತರಿದ್ದರು. ಸಾಹಿತಿ ಗುಣಾಜೆ ರಾಮಚಂದ್ರ ಭಟ್ ಅವರು ತಾವು ಇತ್ತೀಚೆಗೆ ಬರೆದ `ಮಹಾದಾನಿ ಸಾಯಿರಾಂ ಭಟ್' ಪುಸ್ತಕವನ್ನು ಅತಿಥಿಗಳಿಗೆ ನೀಡಿದರು. ವೇದಿಕೆಯಲ್ಲಿ ಸಾಯಿರಾಂ ಭಟ್ ಅವರ ಪತ್ನಿ ಶಾರದಾ ಭಟ್ ಹಾಗೂ ಮನೆಯರು, ಬಂಧುಬಳಗ ಮತ್ತು ಪುರೋಹಿತ ವರ್ಗದವರು ಉಪಸ್ಥಿತರಿದ್ದರು. ಅಭಿಮಾನಿಗಳು ಹಾಗೂ ಅತಿಥಿಗಳು ಸಾಯಿರಾಂ ಭಟ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಸಾಯಿರಾಂ ಭಟ್ ಅವರ ಪುತ್ರ ಕೆ.ಎನ್.ಕೃಷ್ಣ ಭಟ್ ಸ್ವಾಗತಿಸಿದರು.