ಹೈದರಾಬಾದ್: ದೇಶದಲ್ಲಿ ಹಿಜಾಬ್ ಅಥವಾ ಶಿರವಸ್ತ್ರ ಧರಿಸುವುದಕ್ಕೆ ಯಾವುದೇ ನಿಷೇಧ ಇಲ್ಲ. ಸಾಂವಿಧಾನಿಕ ಹಕ್ಕುಗಳು ಮತ್ತು ಕರ್ತವ್ಯಗಳು ಎಲ್ಲರಿಗೂ ಸಮಾನವಾಗಿವೆ ಎಂಬುದನ್ನು ಜನರು ಅರ್ಥೈಸಿಕೊಳ್ಳುವ ಅಗತ್ಯ ಇದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಭಾನುವಾರ ಹೇಳಿದ್ದಾರೆ.
ಇಲ್ಲಿ ಹಮ್ಮಿಕೊಂಡಿದ್ದ 'ಹುನಾರ್ ಹಾತ್' ವಸ್ತುಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಹಿಜಾಬ್ ವಿವಾದ ನ್ಯಾಯಾಲಯದಲ್ಲಿದೆ. ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಅವರದ್ದೇ ಆದ ವಸ್ತ್ರಸಂಹಿತೆ ಮತ್ತು ಸಮವಸ್ತ್ರ ಇದೆ' ಎಂದು ತಿಳಿಸಿದ್ದಾರೆ.
ಹುನಾರ್ ಹಾತ್ ಕಳೆದ ಏಳು ವರ್ಷಗಳಲ್ಲಿ ಸುಮಾರು ಎಂಟು ಲಕ್ಷ ಕುಶಲಕರ್ಮಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದೆ ಎಂದು ನಖ್ವಿ ಹೇಳಿದ್ದಾರೆ.