ನವದೆಹಲಿ: ದೇಶದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಧನಂಜಯ ಯಶವಂತ್ ಚಂದ್ರಚೂಡ್ (ಡಿ.ವೈ ಚಂದ್ರಚೂಡ್) ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಚಂದ್ರಚೂಡ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
2024ರ ನವೆಂಬರ್ 10ರ ವರೆಗೆ ನ್ಯಾಯಮೂರ್ತಿ ಚಂದ್ರಚೂಡ್ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರದಲ್ಲಿ ಇರಲಿದ್ದಾರೆ.
ದೇಶದ 16ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾಯಮೂರ್ತಿ ಯಶವಂತ ವಿಷ್ಣು ಚಂದ್ರಚೂಡ್ ಅವರ ಪುತ್ರರಾಗಿರುವ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು, 44 ವರ್ಷಗಳ ಬಳಿಕ ತಂದೆ ಅಲಂಕರಿದಸಿದ್ದ ಸ್ಥಾನವನ್ನು ವಹಿಸಿಕೊಂಡಿದ್ದಾರೆ.
2016 ಮೇ 13ರಂದು ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾಗಿ ಚಂದ್ರಚೂಡ್ ನೇಮಕವಾಗಿದ್ದರು. ಅದಕ್ಕೂ ಹಿಂದೆ ಅಲಹಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ, ಬಾಂಬೆ ಹೈ ಕೋರ್ಟ್ನ ನ್ಯಾಯಮೂರ್ತಿಯಾಗಿ ಅಧಿಕಾರದಲ್ಲಿದ್ದರು.
ಚಂದ್ರಚೂಡ್ ಅವರು ಅಯೋಧ್ಯೆ ತೀರ್ಪು, ಶಬರಿಮಲೆ ಪ್ರಕರಣ, ಆಧಾರ್ಗೆ ಮಾನ್ಯತೆ ಮುಂತಾದ ಪ್ರಮುಖ ತೀರ್ಪುಗಳನ್ನು ನೀಡಿದ ನ್ಯಾಯಪೀಠದ ಭಾಗವಾಗಿದ್ದರು.