ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಗುಣಗಾನ ಮಾಡಿದ್ದಾರೆ.
ದೇಶಕ್ಕೆ ಉದಾರ ಆರ್ಥಿಕ ನೀತಿಯ ಅಡಿಪಾಯ ಹಾಕಿ, ಬಡವರಿಗೆ ಆರ್ಥಿಕ ಸುಧಾರಣೆಗಳ ಪ್ರಯೋಜನಗಳನ್ನು ಒದಗಿಸಿದರು.
ಇದರ ಪರಿಣಾಮ ದೇಶದ ಆರ್ಥಿಕತೆ ವೇಗ ಪಡೆಯಲು ಸಾಧ್ಯವಾಯಿತು ಎಂದು ಹೊಗಳಿದ್ದಾರೆ.
1991ರಲ್ಲಿ ಹಣಕಾಸು ಸಚಿವರಾಗಿ ಮನಮೋಹನ್ ಸಿಂಗ್ ರೂಪಿಸಿದ ಆರ್ಥಿಕ ಸುಧಾರಣೆಗಳ ಕಾರಣಕ್ಕೆ ದೇಶವು ಅವರಿಗೆ ಋಣಿಯಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಮನಮೋಹನ್ ಸಿಂಗ್ ರೂಪಿಸಿದ ಸುಧಾರಣೆಗಳು ಬಡವರು ಮತ್ತು ರೈತರ ಬೆಳವಣಿಗೆಗೆ ಕಾರಣವಾಯಿತು. ಇದು ನನ್ನ ಅನುಭವಕ್ಕೆ ಬಂದಿದೆ ಎಂದರು. 90ರ ದಶಕದಲ್ಲಿ ನಾನು ಸಚಿವನಾಗಿದ್ದಾಗ ಹಣ ಸಂಗ್ರಹಿಸಿ ರಸ್ತೆಗಳನ್ನು ನಿರ್ಮಾಣ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.
ಸದ್ಯ ಹೆದ್ದಾರಿ ಸಚಿವಾಲಯವು ಟೋಲ್ನಿಂದ ವಾರ್ಷಿಕ ₹40,000 ಕೋಟಿ ಆದಾಯಗಳಿಸುತ್ತಿದೆ. 2024ರ ವೇಳೆಗೆ ಇದು ₹1.40 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು. ಸದ್ಯ ಸಚಿವಾಲಯ ಯಾವುದೇ ಹಣಕಾಸು ಕೊರತೆ ಎದುರಿಸುತ್ತಿಲ್ಲ ಎಂದು ಹೇಳಿದರು.