ಆಂಧ್ರಪ್ರದೇಶ: ಕನ್ನಡದಲ್ಲಿ ಬಿಡುಗೆಯಾದ ಕಾಂತಾರ ಸಿನಿಮಾ ನೋಡ ನೋಡುತ್ತಿದ್ದಂತೆಯೇ, ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಸಿನಿಮಾ ಬಿಡುಗಡೆಯಾಗಿ 50 ದಿನಗಳು ಸಮೀಪಿಸುತ್ತಿದ್ದರೂ, ಸಿನಿಮಾ ಬಗೆಗೆ ಜನರ ಕ್ರೇಝ್ ಮಾತ್ರ ಇನ್ನೂ ಕಡಿಮೆಯಾಗಿಲ್ಲ.
ಇಂದಿಗೂ ಬಹುತೇಕ ಚಿತ್ರಮಂದಿರಗಳಲ್ಲಿ ಕಾಂತಾರ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
ದೇಶದಾದ್ಯಂತ ಜನರು ಕಾಂತಾರ ಸಿನಿಮಾದ ವೈಭವಕ್ಕೆ ಮನಸೋತಿದ್ದಾರೆ. ಈ ಹಿನ್ನೆಲೆಯಲ್ಲಿ ಅನೇಕರು ಒಂದಿಲ್ಲೊಂದು ಚುಟುವಟಿಕೆ ಮೂಲಕ ತಮ್ಮ ಅಭಿಮಾನವನ್ನು ಪ್ರದರ್ಶಿಸುತ್ತಿದ್ದಾರೆ, ಇದೀಗ ಆಂಧ್ರದ ಗುಂಟೂರು ಜಿಲ್ಲೆಯ ತಹಸೀಲ್ದಾರ್ ಒಬ್ಬರು ಕಾಂತಾರ ಸಿನಿಮಾದಲ್ಲಿ ಬರುವ ದೈವದ ವೇಷ ತೊಟ್ಟು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಂದಿದ್ದಾರೆ.
ಆಂಧ್ರಪ್ರದೇಶದ ನಾಗಾರ್ಜುನ ವಿಶ್ವವಿದ್ಯಾಲಯದ ಆವರಣದಲ್ಲಿ ತೆರಿಗೆ ಇಲಾಖೆಯ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕೊತವಾಲ ತಾಲ್ಲೂಕಿನ ತಹಸೀಲ್ದಾರ್ ಪ್ರಸಾದ್ ರಾವ್ ಕಾಂತಾರ ಗೆಟಪ್ ಧರಿಸಿ ಬಂದಿದ್ದಾರೆ. ಇವರಿಗೆ ಮೊದಲಿನಿಂದಲೂ ಕಲೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ. ಹೀಗಾಗಿ ಎಲ್ಲೆಡೆ ಸುದ್ದಿಯಾಗಿರುವ ಕಾಂತಾರ ಸಿನಿಮಾ ಶೈಲಿಯಲ್ಲಿ ಬಂದಿದ್ದಾರೆ ತಹಸೀಲ್ದಾರ್ ಪ್ರಸಾದ್ ರಾವ್. ಇವರ ವೇಷಭೂಷಣ ನೋಡಿದ ಜಿಲ್ಲಾಧಿಕಾರಿ ಹಾಗೂ ನೆರೆದಿದ್ದ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.