ಕಾಸರಗೋಡು: ವಂದೇಭಾರತ್ ಎಕ್ಸ್ಪ್ರೆಸ್ ರೈಲಿನ ಉದ್ಘಾಟನೆ ಸಂದರ್ಭ ವೇದಿಕೆಯಲ್ಲಿ ಭಾಷಣಕ್ಕೆ ಅವಕಾಶ ನೀಡದ ಕ್ರಮದಿಂದ ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ತಮ್ಮ ಅಸಮಧಾನ ವ್ಯಕ್ತಪಡಿಸಿದರು. ಈ ಬಗ್ಗೆ ರೈಲ್ವೆ ವಿಭಾಗೀಯ ಮಹಾಪ್ರಬಂಧಕ ಅರುಣ್ ಕುಮಾರ್ ಚತುರ್ವೇದಿ ಅವರಿಗೆ ವೇದಿಕೆಯಲ್ಲೇ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೇರಿದಂತೆ ಎಡರಂಗ ಹಾಗೂ ಐಕ್ಯರಂಗದ ಮುಖಂಡರನ್ನು ಸಭೆಗೆ ಆಹ್ವಾನಿಸಿದ್ದರೂ, ಅವರಿಗೆ ವೇದಿಕೆಯಲ್ಲಿ ಆಸನ ವ್ಯವಸ್ಥೆ ಮಾಡದಿರುವ ಬಗ್ಗೆಯೂ ಶಾಸಕ ಅಸಮಧಾನ ವ್ಯಕ್ತಪಡಿಸಿದರು.
ಮಹಿಳಾ ಮೀಸಲಾತಿ ಬಿಲ್ ಲೋಕಸಭೆಯಲ್ಲಿ ಮಂಡಿಸಿದ್ದರೂ, ವೇದಿಕೆಯಲ್ಲಿ ಯಾವುದೇ ಮಹಿಳಾ ಪ್ರತಿನಿಧಿಗೆ ಅವಕಾಶ ಕಲ್ಪಿಸದಿರುವ ಬಗ್ಗೆ ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಮ್ಮ ಅಸಮಧಾನ ವ್ಯಕ್ತಪಡಿಸಿದರು. ಅತ್ಯಂತ ಮಹತ್ವದಿಂದ ಕೂಡಿದ ಸಮಾರಂಭವೊಂದರಲ್ಲಿ ಕ್ಷುಲ್ಲಕ ಕಾರಣವೊಡ್ಡಿ ಕಾರ್ಯಕ್ರಮಕ್ಕೆ ಕಪ್ಪುಚುಕ್ಕೆ ಬಳಿಯಲು ಉಭಯರಂಗಗಳು ಶ್ರಮಿಸಿರುವುದು ಖಂಡನೀಯ ಎಂದು ಭಾರತೀಯ ರೈಲ್ವೆ ಪ್ಯಾಸೆಂಜರ್ಸ್ ಅಮಿನಿಟೀಸ್ ಸಮಿತಿ ಅಧ್ಯಕ್ಷ ಪಿ.ಕೆ ಕೃಷ್ಣದಾಸ್ ಪ್ರತಿಕ್ರಿಯೆ ನೀಡಿದ್ದಾರೆ.

