HEALTH TIPS

Pahalgam Terror Attack: 5.5 ಲಕ್ಷ ಮಸೀದಿಗಳಿಂದ ಭಯೋತ್ಪಾದಕರಿಗೆ ಕಟು ಸಂದೇಶ

ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ (ಏ. 22) ನಡೆದ ಭಯೋತ್ಪಾದಕರ ದಾಳಿಯನ್ನು ಮುಸ್ಲಿಂ ಸಂಘಟನೆಗಳು ಮಂಗಳವಾರ ಖಂಡಿಸಿವೆ.

'ಭಯೋತ್ಪಾದನೆ ಎಂಬುದು ಕ್ಯಾನ್ಸರ್‌ ಇದ್ದಂತೆ. ಇದು ಇಸ್ಲಾಂ ಬೋಧಿಸುವ ಶಾಂತಿ ನೀತಿಯ ವಿರುದ್ಧವಾದದ್ದು' ಎಂದು ಜಮೈತ್‌ ಉಲೆಮಾ ಎ ಹಿಂದ್‌ ಹೇಳಿದೆ.

ಪ್ರವಾಸಿಗರನ್ನೇ ಗುರಿಯಾಗಿಸಿ ಪಹಲ್ಗಾಮ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ರಾಜ್ಯದ ಮೂವರು ಸೇರಿದಂತೆ 26 ಜನ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ.

ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯಸ್ಥ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಪ್ರತಿಕ್ರಿಯಿಸಿ, 'ದೇಶದಲ್ಲಿ ಸುಮಾರು 5.5 ಲಕ್ಷ ಮಸೀದಿಗಳಿವೆ. ಭಯೋತ್ಪಾದನೆ ವಿರುದ್ಧ ಅವೆಲ್ಲವುಗಳಿಂದಲೂ ಕಟು ಸಂದೇಶ ರವಾನಿಸಲಾಗುವುದು. ಶುಕ್ರವಾರದ ವಿಶೇಷ ಪ್ರಾರ್ಥನೆಯಲ್ಲಿ ದುರಂತದಲ್ಲಿ ಮಡಿದವರಿಗಾಗಿ ಪ್ರಾರ್ಥಿಸಲಾಗುವುದು' ಎಂದಿದ್ದಾರೆ.

'ಧರ್ಮವನ್ನು ಆಧರಿಸಿ ಅಮಾಯಕರನ್ನು ಕೊಲ್ಲುವುದು ಇಸ್ಲಾಂಗೆ ವಿರುದ್ಧವಾದದ್ದು. ಜತೆಗೆ ಮನುಷ್ಯತ್ವದ ವಿರೋಧಿ ಕೃತ್ಯವೂ ಹೌದು. ಭಯೋತ್ಪಾದಕರನ್ನು ಹತ್ಯೆಗೈದರೆ, ಅವರನ್ನು ಈ ದೇಶದ ನೆಲದಲ್ಲಿ ಹೂಳಬಾರದು ಎಂದು ನಾವು ಸರ್ಕಾರದಲ್ಲಿ ಮನವಿ ಮಾಡಿಕೊಳ್ಳುತ್ತೇವೆ' ಎಂದು ಇಲ್ಯಾಸಿ ಹೇಳಿದ್ದಾರೆ.

ಜಮೈತ್‌ ಉಲೆಮಾ ಎ ಹಿಂದ್ ಅಧ್ಯಕ್ಷ ಮೌಲಾ ಅರ್ಶದ್ ಮದನಿ ಅವರು ಪಹಲ್ಗಾಮ್‌ ಘಟನೆಯನ್ನು ಕಟುವಾಗಿ ಖಂಡಿಸಿದ್ದಾರೆ. 'ಇದು ಹೇಡಿಗಳ ಕೃತ್ಯ. ಅಮಾಯಕರನ್ನು ಕೊಲ್ಲುವವರು ಮನುಷ್ಯರಲ್ಲ, ಮೃಗಗಳು. ಭಯೋತ್ಪಾದನೆಗೆ ಇಸ್ಲಾಂನಲ್ಲಿ ಸ್ಥಳವೇ ಇಲ್ಲ. ಇಂಥ ಕೃತ್ಯದ ವಿರುದ್ಧ ಪ್ರತಿಯೊಬ್ಬರೂ ದ್ವನಿ ಎತ್ತಬೇಕು. ದುರಂತದಲ್ಲಿ ಮಡಿದವರ ಕುಟುಂಬದವರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ' ಎಂದಿದ್ದಾರೆ.

'ದಾಳಿಯ ನಂತರ ರಕ್ಷಣಾ ಸಿಬ್ಬಂದಿ ಬರುವವರೆಗೂ ಸ್ಥಳೀಯರು ದಾಳಿಗೊಳಗಾದವರಿಗೆ ನೆರವಾಗಿದ್ದಾರೆ. ಇದು ಮನುಷ್ಯತ್ವಕ್ಕೆ ಸಾಕ್ಷಿ. ಕಾಶ್ಮೀರದ ಸಾಮಾನ್ಯ ಜನರು ಘಟನೆಯಿಂದ ಆಘಾತಕ್ಕೊಳಗಾಗಿದ್ದಾರೆ. ಹಲವೆಡೆ ಪ್ರತಿಭಟನೆಗಳೂ ನಡೆದಿವೆ. ಶಾಂತಿ, ಏಕತೆ ಮತ್ತು ಅಭಿವೃದ್ಧಿಯನ್ನು ಇಲ್ಲಿನ ಜನರು ಬಯಸುತ್ತಿದ್ದಾರೆಯೇ ಹೊರತು, ತೀವ್ರವಾದಿಗಳಿಗೆ ಬೆಂಬಲ ನೀಡುವುದಲ್ಲ' ಎಂದು ಮದನಿ ಹೇಳಿದ್ದಾರೆ.

'ಇದು ದ್ವೇಷವನ್ನು ಬಿತ್ತುವ ಕಾಲವಲ್ಲ. ಹೀಗಾಗಿ ಮಾಧ್ಯಮದವರು ಏಕಮುಖವಾದ ಸುದ್ದಿಗಳನ್ನು ಪ್ರಸಾರ ಮಾಡುವ ಬದಲು, ಸಮಾಜದಲ್ಲಿ ಏಕತೆ ಮತ್ತು ಸೋದರತ್ವ ಬಿತ್ತುವ ಸುದ್ದಿಗಳನ್ನು ಪ್ರಸಾರ ಮಾಡಬೇಕು' ಎಂದು ಮನವಿ ಮಾಡಿಕೊಂಡಿದ್ದಾರೆ.

ಜಮಾತ್‌ ಎ ಇಸ್ಲಾಮಿ ಹಿಂದ್‌ ಅಧ್ಯಕ್ಷ ಸಯದ್ ಸದಾತುಲ್ಲಾ ಹುಸೈನಿ ತಮ್ಮ ಹೇಳಿಕೆಯಲ್ಲಿ, 'ಪಹಲ್ಗಾಮ್‌ನಲ್ಲಿ ನಡೆದ ಹೀನ ಕೃತ್ಯ ಖಂಡನೀಯ. ಮುಗ್ದ ಜೀವಗಳನ್ನು ಕಳೆದುಕೊಂಡಿರುವುದು ನಿಜಕ್ಕೂ ನೋವಿನ ಸಂಗತಿ. ಮೃತರ ಕುಟುಂಬದವರೊಂದಿಗೆ ನಾವಿದ್ದೇವೆ. ಇಂಥ ಅಮಾನುಷ ಕೃತ್ಯಕ್ಕೆ ಯಾವುದೇ ಸಮರ್ಥನೆ ಇಲ್ಲ' ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries