ಪೆರ್ಲ: ಸಂಗೀತ ಹಾಗೂ ನೃತ್ಯ ಏಕಕಾಲಕ್ಕೆ ಎಲ್ಲರಿಗೂ ಒಲಿಯುವ ವಿದ್ಯೆಯಲ್ಲ. ಆದರೆ ಸತತ ಪರಿಶ್ರಮದಿಂದ ನಾಟ್ಯವಿದ್ಯಾನಿಲಯದ ಶಿಷ್ಯೆ ಸಿಂಚನ ಅದೆಲ್ಲವನ್ನೂ ಮೀರಿದ ಸಾಧನೆಯನ್ನು ಮಾಡಿ ರಂಗಪ್ರವೇಶವನ್ನು ಮಾಡಿದ್ದಾಳೆ. ರಂಗಪ್ರವೇಶವು ನಿಂತ ನೀರಾಗದೆ ನಾದವು ನಿರಂತರ ಹರಿಯುತ್ತಿರಬೇಕು ಎಂದು ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಇದರ ನಿರ್ದೇಶಕ ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ.ಚಂದ್ರಶೇಖರ ನಾವಡ ಹೇಳಿದರು.
ನಾಟ್ಯ ವಿದ್ಯಾನಿಲಯ ಕುಂಬಳೆ ಇದರ ನೃತ್ಯಗುರುಗಳಾದ ವಿದುಷಿ ಡಾ. ವಿದ್ಯಾಲಕ್ಷ್ಮೀ ಇವರ ಶಿಷ್ಯೆ ಕು. ವಿದುಷಿ ಸಿಂಚನ ಲಕ್ಷ್ಮೀ ಕೋಡಂದೂರು ಇವರ ಭರತನಾಟ್ಯ ರಂಗಪ್ರವೇಶದ ವಿಟ್ಲ ಗಾರ್ಡನ್ ಆಡಿಟೋರಿಯಂನಲ್ಲಿ ಗುರುವಾರ ಜರಗಿದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಭರತನಾಟ್ಯವೆಂಬ ಕಲೆಯ ಮೂಲಕ ಅನೇಕ ಶಿಷ್ಯಂದಿರನ್ನು ಬೆಳಕಿಗೆ ತಂದ ಡಾ. ವಿದ್ಯಾಲಕ್ಷ್ಮೀ ಅವರು ಜನಮೆಚ್ಚುವ ಸಾಧನೆಯನ್ನು ಮಾಡಿದ್ದಾರೆ. ಸಿಂಚನಲಕ್ಷ್ಮೀಯಂತಹ ಅನೇಕ ಪ್ರತಿಭೆಗಳನ್ನು ನೀಡಿ ಕಲೆಯ ಮೇಲಿನ ಪ್ರೀತಿಯನ್ನು ಅವರು ತೋರ್ಪಡಿಸಿದ್ದಾರೆ ಎಂದರು.
ವೇದಮೂರ್ತಿ ಅನಂತ ನಾರಾಯಣ ಭಟ್ ಪರಕ್ಕಜೆ ನೇತೃತ್ವದಲ್ಲಿ ವೇದಮೂರ್ತಿ ಮಹೇಶ್ ಪರಕ್ಕಜೆ ದೀಪಪ್ರಜ್ವಲನೆಗೈದು ವೈದಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಪ್ರಸಿದ್ಧ ಮೃದಂಗವಾದಕ ವಿದ್ವಾನ್ ಡಾ. ವಿ.ಆರ್. ನಾರಾಯಣ್ ಪ್ರಕಾಶ್ ಕಲ್ಲಿಕೋಟೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ಇದರ ನಿರ್ದೇಶಕ ವಿದ್ವಾನ್ ಬಿ.ದೀಪಕ್ ಕುಮಾರ್ ಪುತ್ತೂರು, ಪುತ್ತೂರು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಹೇಶ್ ಪ್ರಸನ್ನ, ವಿಟ್ಲ ಅರಮನೆಯ ಕೆ.ಕೃಷ್ಣಯ್ಯ, ವಿಟ್ಲ ಶ್ರೀ ಭಗವತೀ ದೇವಸ್ಥಾನದ ವ್ಯವಸ್ಥಾಪಕ ಕೇಶವ ಆರ್.ವಿ. ಅತಿಥಿಗಳಾಗಿ ಪಾಲ್ಗೊಂಡು ಶುಭಹಾರೈಸಿದರು. ಸವಿತಾ ಕೋಡಂದೂರು ನೇತೃತ್ವ ವಹಿಸಿದ್ದರು. ಕುಂಬಳೆ ನಾಟ್ಯ ವಿದ್ಯಾನಿಲಯದ ವಿದುಷಿ ಡಾ. ವಿದ್ಯಾಲಕ್ಷ್ಮೀ ಇವರಿಗೆ ಗುರುವಂದನೆ ನಡೆಯಿತು. ರಘುರಾಮ ಶಾಸ್ತ್ರಿ ಕೋಡಂದೂರು ಸ್ವಾಗತಿಸಿ, ವಿದುಷಿ ಸಿಂಚನಾ ಲಕ್ಷ್ಮೀ ಕೋಡಂದೂರು ವಂದಿಸಿದರು.
ಭರತನಾಟ್ಯ ರಂಗಪ್ರವೇಶ :
ಕುಂಬಳೆಯ ನಾಟ್ಯವಿದ್ಯಾನಿಲಯದ ವಿದುಷಿ ಡಾ. ವಿದ್ಯಾಲಕ್ಷ್ಮೀಯವರ ಶಿಷ್ಯೆಯಾದ ಕು| ವಿದುಷಿ ಸಿಂಚನ ಲಕ್ಷ್ಮೀ ಕೋಡಂದೂರು ಇವರು ಭರತನಾಟ್ಯ, ಸಂಗೀತ, ಪಾಠೇತರ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭೆ. ತನ್ನ ಹಾವಭಾವಗಳಿಂದ ರಂಗಪ್ರವೇಶದಲ್ಲಿ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.
ಪುಷ್ಪಾಂಜಲಿ ಮತ್ತು ಗಜವದನ ಆದಿ ತಾಳ ಶ್ರೀ ರಂಜಿನಿ ರಾಗದಲ್ಲಿ ಪಾಪನಾಶ ಶಿವಂ ರಚನೆ, ಜತಿಸ್ವರ-ರಸಿಕಪ್ರಿಯ ರಾಗ-ಆದಿ ತಾಳ-ಲಾಲ್ಗುಡಿ ಜಯರಾಮನ್, ಶಬ್ದಂ-ರಾಗಮಾಲಿಕೆ-ಮಿಶ್ರ ಛಾಪು-ರಾಮಯ್ಯ ಪಿಳ್ಳೈ ಪದವರ್ಣ (ಮಾತೆ ಮಲಯಧ್ವಜ) -ಖಮಚ್ ರಾಗ-ಆದಿ ತಾಳ-ಮುತ್ತಯ್ಯ ಭಾಗವತರ್ ಕೃತಿ(ಉಮಾಮಹೇಶ್ವರಿ)-ರೇವತಿ ರಾಗ-ಆದಿ ತಾಳ-ಆಲತ್ತೂರು ವಿಜಯ ಕುಮಾರ್, ಪದಮ್ (ಅಲೈಪಾಯುದೇ)-ಕಾನದ ರಾಗ-ಆದಿ ತಾಳ-ಉತ್ತುಕಾಡು ವೆಂಕಟ ಸುಬ್ಬಯ್ಯರ್ ದೇವರನಾಮ(ಹರಿಸ್ಮರಣೆ)-ಯಮನ ಕಲ್ಯಾಣಿ-ಆದಿ ತಾಳ-ಪುರಂದರ ದಾಸರು, ತಿಲ್ಲಾನ - ರಾಗಮಾಲಿಕೆ-ಆದಿ ತಾಳ-ದಂಡಾಯುಧ ಪಾಣಿ ಪಿಳ್ಳೈ ಮಂಗಳದಲ್ಲಿ ಕಾರ್ಯಕ್ರಮ ಮುಕ್ತಾಯವಾಯಿತು. ಸುಮಾರು ಎರಡೂವರೆ ಗಂಟೆಗಳ ಕಾಲ ಸೇರಿದ್ದ ಜನಸ್ತೋಮದ ಮುಂದೆ ನರ್ತಿಸಿದ ನರ್ತಕಿ ಕಲಾಸಕ್ತ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ನಟುವಾಂಗದಲ್ಲಿ ವಿದುಷಿ ಡಾ. ವಿದ್ಯಾಲಕ್ಷ್ಮೀ ಕುಂಬಳೆ, ಹಾಡುಗಾರಿಕೆಯಲ್ಲಿ ವಿದ್ವಾನ್ ಶಿಜು ಕರುಣಾಕರನ್ ಕಣ್ಣೂರು, ವಸಂತ ಕುಮಾರ ಗೋಸಾಡ, ಮೃದಂಗದಲ್ಲಿ ವಿದ್ವಾನ್ ಸುರೇಶ್ ಬಾಬು ಕಣ್ಣೂರು, ಕೊಳಲು ರಾಹುಲ್ ಕಣ್ಣೂರು, ರಿದಂಪ್ಯಾಡ್ನಲ್ಲಿ ಪ್ರಭಾಕರ ಮಲ್ಲ ಸಹಕರಿಸಿದರು. ಮಲ್ಲಿಕಾ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.




.jpg)
