ಕ್ಯೂಬಾ: ವೆನೆಜುವೆಲಾದಲ್ಲಿ ಅಮೆರಿಕ ನಡೆಸಿದ ಸೇನಾ ಕಾರ್ಯಾಚರಣೆಯನ್ನು ಭಾರತದಲ್ಲಿನ ಕ್ಯೂಬಾದ ರಾಯಭಾರಿ ಯುವಾನ್ ಕಾರ್ಲೋಸ್ ಮಾರ್ಸನ್ ಅಗುಲೆರಾ ಅವರು ತೀವ್ರವಾಗಿ ಖಂಡಿಸಿದ್ದಾರೆ.
'ಅಮೆರಿಕದ ಹುಚ್ಚುತನವನ್ನು ನಿಲ್ಲಿಸಲು ಇತರ ಪ್ರಮುಖ ಶಕ್ತಿಗಳು ಒಂದಾಗಬೇಕು.
ಜಗತ್ತಿನಲ್ಲಿ ಈಗ ಸಮತೋಲನ ಕಾಯ್ದುಕೊಳ್ಳುವ ಕೆಲಸ ಅಗತ್ಯವಾಗಿ ನಡೆಯಬೇಕಿದ್ದು, ಭಾರತವು ಆ ಕೆಲಸ ಮಾಡಬೇಕು' ಎಂದು ಅವರು ಮಂಗಳವಾರ ಹೇಳಿದ್ದಾರೆ.
'ಅಮೆರಿಕವನ್ನು ಒಂಟಿಯಾಗಿ ತಡೆಯಲು ಯಾವುದೇ ದೇಶಕ್ಕೆ ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ವಿಶ್ವಸಂಸ್ಥೆ ಆ ಕೆಲಸ ಮಾಡುತ್ತದೆ ಎಂದು ನಾವು ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಸಂಸ್ಥೆಗಳು ಅಮೆರಿಕ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯಬೇಕು ಎಂಬುದನ್ನು ನಾವು ಒಪ್ಪಲಾಗದು. ಎಲ್ಲ ದೇಶಗಳು ಒಗ್ಗಟ್ಟು ತೋರಿಸುವ ಸಮಯ ಬಂದಿದೆ. ಅಮೆರಿಕದ ಹುಚ್ಚುತನವನ್ನು ನಿಲ್ಲಿಸಲು ಇರುವ ಏಕೈಕ ಮಾರ್ಗ ಅದಾಗಿದೆ' ಎಂದಿದ್ದಾರೆ.
'ವೆನೆಜುವೆಲಾದಲ್ಲಿ ನಡೆದ ಬೆಳವಣಿಗೆಯು ಜಗತ್ತಿಗೆ ಅಪಾಯಕಾರಿ ಸಂದೇಶವನ್ನು ರವಾನಿಸುತ್ತದೆ. ಒಂದು ದೇಶವು ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುವ ಮೂಲಕ ಇನ್ನೊಂದು ದೇಶದ ಮೇಲೆ ದಬ್ಬಾಳಿಕೆ ನಡೆಸಲು ಅನುವು ಮಾಡಿಕೊಡುತ್ತದೆ' ಎಂದು ಎಚ್ಚರಿಸಿದರು.
'ಭಯೋತ್ಪಾದಕ ಕೃತ್ಯ': 'ಅಮೆರಿಕದ ಮಿಲಿಟರಿ ಆಕ್ರಮಣವು ನನ್ನ ಅಭಿಪ್ರಾಯದಲ್ಲಿ ಕ್ರಿಮಿನಲ್ ಕೃತ್ಯ. ಮಾತ್ರವಲ್ಲ, ಅದು ಭಯೋತ್ಪಾದಕ ಕೃತ್ಯವೂ ಹೌದು. ಏಕೆಂದರೆ, ಈ ಕಾರ್ಯಾಚರಣೆಯು ವಿಶ್ವಸಂಸ್ಥೆಯ ಸನ್ನದು ಮತ್ತು ಅಂತರರಾಷ್ಟ್ರೀಯ ಕಾನೂನಿನ ಎಲ್ಲಾ ತತ್ವಗಳನ್ನು ಉಲ್ಲಂಘಿಸುತ್ತದೆ. ಸಾರ್ವಭೌಮ ರಾಷ್ಟ್ರದ ವಿರುದ್ಧ ಏಕಪಕ್ಷೀಯವಾಗಿ ಕೈಗೊಂಡ ಕ್ರಮ ಇದು' ಎಂದು ಟೀಕಿಸಿದ್ದಾರೆ.

