ಕಾಸರಗೋಡು: ನೆರೆಮನೆಯಿಂದ ಚಿನ್ನ ಕಳವಿಗೀಡಾಗಿರುವುದನ್ನು ಪ್ರಶ್ನಿಸಿದ ಅವಮಾನದಿಂದ ಆಲಂಪಾಡಿ ನಾಲತ್ತಡ್ಕ ನಿವಾಸಿ ಜಸೀಲಾ(24) ವಿಷ ಸೇವಿಸಿ ಆತ್ಮಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸಮಗ್ರ ತನಿಖೆ ಕೈಗೆತ್ತಿಕೊಂಡಿದ್ದಾರೆ. ಜಸೀಲಾ ಸಹೋದರನಿಂದ, ಆಕೆ ಹೆತ್ತವರು ಹಾಗೂ ಸಂಬಂಧಿಕರಿಂದಲೂ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಜಸೀಲಾ ಫೆ.15ರಂದು ವಿಷ ಸೇವಿಸಿದ್ದು, ಗಂಭೀರಾವಸ್ಥೆಯಲ್ಲಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಜಸೀಲಾ ಅವರ ಬೋವಿಕ್ಕಾನದ ಪೊವ್ವಲ್ನಲ್ಲಿರುವ ಪತಿ ಮನೆಯ ನೆರೆಮನೆಯೊಂದರಿಂದ ಒಂಬತ್ತು ಪವನು ಚಿನ್ನ ನಾಪತ್ತೆಯಾಗಿದ್ದು, ಈ ಬಗ್ಗೆ ಮನೆಯವರ ದೂರಿನನ್ವಯ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಈ ಬಗ್ಗೆ ಜಸೀಲಾ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಅಲ್ಲದೆ ದೂರುದಾತ ಹಾಗೂ ಜಸೀಲಾ ಅವರ ಪತಿ ಮನೆಯವರು ನಾಲತ್ತಡ್ಕದಲ್ಲಿರುವ ಜಸೀಲಾ ಅವರ ಮನೆಗೆ ಆಗಮಿಸಿ ಚಿನ್ನ ಕಳವಿನ ಬಗ್ಗೆ ಪ್ರಸ್ತಾಪಿಸಿದ್ದರು. ಇದು ವಾಗ್ವಾದಕ್ಕೂ ಕಾರಣವಾಗಿತ್ತು. ಈ ಮಧ್ಯೆ ಜಸೀಲಾ ವಿಡಿಯೋ ಕಾಲ್ ಮಾಡಿ ತಾನು ಯಾವುದೇ ಚಿನ್ನ ಕಳವುಗೈದಿಲ್ಲ. ಆರೋಪದಿಂದ ಮಾನಸಿಕವಾಗಿ ನೊಂದಿರುವುದಾಗಿ ತಿಳಿಸಿ, ನಂತರ ವಿಷ ಸೇವಿಸಿದ್ದರು. ಆಸ್ಪತ್ರೆಯಲ್ಲಿ ಗಂಭೀರಾವಸ್ಥೆಯಲ್ಲಿದ್ದ ಜಸೀಲಾ ಅವರಿಂದ ಮ್ಯಾಜಿಸ್ಟ್ರೇಟರು ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದರು.

