ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದಟ್ಟಾರಣ್ಯ ಹಾಗೂ ಕಡಿದಾದ ಕಣಿವೆ ಪ್ರದೇಶಗಳಲ್ಲಿ ಅಡಗಿರುವ ಪಾಕಿಸ್ತಾನದ ಭಯೋತ್ಪಾದಕರನ್ನು ಮಟ್ಟ ಹಾಕಲು ವಿಶೇಷ ಕಾರ್ಯಾಚರಣೆ ಗುಂಪಿನ (ಎಸ್ಒಜಿ) 350 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ವಿಶೇಷ ಕಾರ್ಯಾಚರಣೆ ಗುಂಪು (ಎಸ್ಒಜಿ), ಜಮ್ಮು ಮತ್ತು ಕಾಶ್ಮೀರ ಪೊಲೀಸ್ನ ವಿಶೇಷ ಘಟಕವಾಗಿದ್ದು, ಭಯೋತ್ಪಾದನಾ ನಿಗ್ರಹ ಸೇರಿದಂತೆ ಕ್ಲಿಷ್ಟಕರವಾದ ಭೂಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವ ಪರಿಣಿತಿಯನ್ನು ಹೊಂದಿದೆ.
ಎಸ್ಒಜಿ ಗುಂಪಿನ ಸಿಬ್ಬಂದಿ, ಆಂಧ್ರ ಪ್ರದೇಶದಲ್ಲಿ ವಿಶೇಷ ತರಬೇತಿಯನ್ನು ಪಡೆದಿದೆ. ಇದರ ಮೊದಲ ಗುಂಪು 10 ತಿಂಗಳ ಹಿಂದೆ ವಿಶೇಷ ತರಬೇತಿಯನ್ನು ಆರಂಭಿಸಿತ್ತು.
ಹಿಮಾಲಯ ಪರ್ವತ ಶ್ರೇಣಿ, ಗುಡ್ಡಗಾಡು ಪ್ರದೇಶದಲ್ಲಿ ಕಾರ್ಯಾಚರಿಸಲು ವಿಶೇಷ ಪರಿಣಿತಿಯನ್ನು ಹೊಂದಿದ ಈ ಪಡೆ, ಕಣಿವೆ ರಾಜ್ಯದಲ್ಲಿ ಭಯೋತ್ಪಾದನಾ ವಿರುದ್ಧ ಕಾರ್ಯಾಚರಣೆಯಲ್ಲಿ ಮತ್ತಷ್ಟು ಪರಿಣಾಮಕಾರಿಯೆನಿಸಲಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
2025ರ ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಭಯೋತ್ಪಾದನಾ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು.
ಈ ದಾಳಿಯು ಅತ್ಯಂತ ಕಠಿಣ ಭೂಪ್ರದೇಶದಲ್ಲೂ ಕಾರ್ಯಾಚರಿಸುವ ಅಗತ್ಯತೆಯನ್ನು ಸಾರಿದೆ. ತರಬೇತಿ ಪೂರ್ಣಗೊಳಿಸಿದ ಸಿಬ್ಬಂದಿಯನ್ನು ಕಾರ್ಯಾಚರಣೆಗಾಗಿ ನಿಯೋಜಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಯೋತ್ಪಾದಕರಿಗೆ ಅಡಗುತಾಣವಾಗಿರುವ ಕಡಿದಾದ ಅರಣ್ಯ ಪ್ರದೇಶದಲ್ಲಿ ಎಸ್ಒಜಿ ತಂಡವು ಕಾರ್ಯಾಚರಣೆ ನಡೆಸಲಿದೆ. ಇದು ಕಾರ್ಯತಂತ್ರ ಯೋಜನೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದೆ ಎಂದಿದ್ದಾರೆ.
ಎಸ್ಒಜಿ ಕಾರ್ಯಾಚರಣೆಗೆ ಪೂರಕವಾಗಿ ಗೃಹ ಸಚಿವಾಲಯು ಅಂತರರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆಯ ಏಳು ಹೆಚ್ಚುವರಿ ಬೆಟಾಲಿಯನ್ಗಳನ್ನು ನಿಯೋಜಿಸಿದೆ. ಗಡಿಯಲ್ಲಿ ನುಸುಳುವಿಕೆಯನ್ನು ಸಂಪೂರ್ಣವಾಗಿ ತಡೆಯುವುದು ಇದರ ಗುರಿಯಾಗಿದೆ.
ಪಾಕ್ ಸೇನೆಯಿಂದ ತರಬೇತಿ ಪಡೆದ ಭಯೋತ್ಪಾದಕರು ಅಂತರರಾಷ್ಟ್ರೀಯ ಗಡಿಯ ಸಮೀಪ ಲಾಂಚ್ ಪ್ಯಾಡ್ಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಗಾಗಿ ಎಸ್ಒಜಿ ಸಹಿತ ಬಿಎಸ್ಎಫ್ ನಿಯೋಜನೆಯು ಉಗ್ರರ ಬೆದರಿಕೆಗಳನ್ನು ಮಟ್ಟ ಹಾಕಲು ನೆರವಾಗಲಿದೆ.

