ನವದೆಹಲಿ (PTI): ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಪದಚ್ಯುತಿ ಕೋರಿ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ನೋಟಿಸ್ ಸಲ್ಲಿಸಿದ್ದು, 'ಮುಖ್ಯ ಚುನಾವಣಾ ಆಯುಕ್ತರು ಕಾರ್ಯಾಂಗದ ಕೈಗೊಂಬೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ' ಎಂದು ಆರೋಪಿಸಿವೆ.
'ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮೂಲಕ 'ಮತದಾರರ ಸಾಮೂಹಿಕ ಹಕ್ಕು ನಿರಾಕರಿಸಿದ್ದಾರೆ' ಎಂದು ನೋಟಿಸ್ನಲ್ಲಿ ಆರೋಪಿಸಿರುವ ವಿಪಕ್ಷಗಳು ಜ್ಞಾನೇಶ್ ಕುಮಾರ್ ಅವರ ನೇಮಕದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿವೆ.
ಮಾರ್ಚ್ 12ರಂದು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ್ದ ವಿಪಕ್ಷಗಳು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಏಳು ಆರೋಪಗಳನ್ನು ಪಟ್ಟಿ ಮಾಡಿದ್ದವು. ಈ ಆರೋಪಗಳು 'ಸಾಬೀತಾಗಿರುವ ದುರ್ವರ್ತನೆ'. ಇದರ ಅಡಿ ಕ್ರಮ ಜರುಗಿಸಿ ಎಂದು ವಿಪಕ್ಷಗಳು ಆಗ್ರಹಿಸಿವೆ.
ಲೋಕಸಭೆಯ 130, ರಾಜ್ಯಸಭೆಯ 63 ವಿಪಕ್ಷ ಸದಸ್ಯರು ಸಹಿ ಮಾಡಿದ್ದ ನೋಟಿಸ್ ಅನ್ನು ಸದನದಲ್ಲಿ ಸಲ್ಲಿಸಲಾಗಿತ್ತು.
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ಟೀಕಿಸಿದ ವಿಚಾರ, ಎಸ್ಐಆರ್ ಕುರಿತು ವಿಪಕ್ಷಗಳು ನೀಡಿದ್ದ ದೂರುಗಳಿಗೆ ಸರಿಯಾಗಿ ಸ್ಪಂದಿಸಿಲ್ಲ ಎಂಬ ಅಂಶಗಳನ್ನು ನೋಟಿಸ್ನಲ್ಲಿ ಪ್ರಸ್ತಾಪಿಸಲಾಗಿದೆ.
ಕೇಂದ್ರ ಚುನಾವಣಾ ಆಯೋಗವನ್ನು ಮುಖ್ಯ ಚುನಾವಣಾ ಆಯುಕ್ತರು ರಾಜಕೀಯ ಕಾರ್ಯಸೂಚಿಗಳನ್ನು ಕಾರ್ಯಗತಗೊಳಿಸುವ ಸಾಧನವನ್ನಾಗಿ ಪರಿವರ್ತಿಸಿದ್ದಾರೆ. ಮತದಾರರ ದಾಖಲೆಗಳನ್ನು ಕೇಳುವ ಮೂಲಕ 'ಪೌರತ್ವ ನಿರ್ಧರಣಾ ನ್ಯಾಯಮಂಡಳಿ'ಯನ್ನಾಗಿ ಮಾಡಿದ್ದಾರೆ ಎಂದು ವಿಪಕ್ಷಗಳು ದೂರಿವೆ.
ಬಿಹಾರದಲ್ಲಿ ಎಸ್ಐಆರ್ ಮೂಲಕ 65 ಲಕ್ಷ ಮತದಾರರನ್ನು ಪಟ್ಟಿಯಿಂದ ಹೊರಹಾಕಲಾಯಿತು. ಇದರಿಂದ ಎನ್ಡಿಎಗೆ ಅನುಕೂಲ ಆಗಿದೆ.
ದೊಡ್ಡ ರಾಜ್ಯಗಳಲ್ಲಿ 2-3 ತಿಂಗಳುಗಳಲ್ಲೇ ತರಾತುರಿಯಲ್ಲಿ ಎಸ್ಐಆರ್ ಆರಂಭಿಸಲಾಯಿತು. ವಿಪಕ್ಷಗಳ ಮನವಿಗಳನ್ನು ಉದ್ದೇಶಪೂರ್ವಕವಾಗಿ ಅಲಕ್ಷಿಸಲಾಯಿತು. ಕೊನೆಗೆ ನ್ಯಾಯಾಲಯ ಸೂಚನೆ ಕೊಡಬೇಕಾಯಿತು.ಇದು ಅವರ ಪಕ್ಷಪಾತಿ ಮನಸ್ಥಿತಿ ತೋರಿಸುತ್ತದೆ ಎಂದು ನೋಟಿಸ್ನಲ್ಲಿ ಆರೋಪಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಸುಮಾರು 58 ಲಕ್ಷ ಮತದಾರರ ಹೆಸರು ತೆಗೆದು ಹಾಕಲಾಗಿದೆ. 60 ಲಕ್ಷ ಹೆಸರುಗಳು ಇನ್ನೂ ನಿರ್ಣಯದ ಹಂತದಲ್ಲಿವೆ. ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್ಆರ್ಸಿ) ಹಿಂಬಾಗಿಲ ಮೂಲಕ ತರುವ ಪ್ರಯತ್ನ ಇದು ಎಂದು ವಿಪಕ್ಷಗಳು ಆರೋಪಿಸಿವೆ.
2025ರಲ್ಲಿ ಜ್ಞಾನೇಶ್ ಕುಮಾರ್ ಅವರ ಆಯ್ಕೆಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಅಸಮ್ಮತಿ ವ್ಯಕ್ತಪಡಿಸಿದ್ದರು ಎಂಬ ಅಂಶವನ್ನೂ ಪ್ರಸ್ತಾಪಿಸಲಾಗಿದೆ.
ಕರ್ನಾಟಕದ ಮಹದೇವಪುರ ಹಾಗೂ ಅಳಂದ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಅಕ್ರಮ ನಡೆದಿರುವ ಬಗ್ಗೆ ರಾಹುಲ್ ಗಾಂಧಿ ಮಾಡಿದ್ದ ಆರೋಪಗಳಿಗೆ ಆಯೋಗ ಸೂಕ್ತವಾಗಿ ಸ್ಪಂದಿಸಿಲ್ಲ. ಬದಲಿಗೆ ಸಿಇಸಿ ಅವರು, 'ರಾಹುಲ್ ಗಾಂಧಿ ಕ್ಷಮೆ ಕೇಳಬೇಕು ಇಲ್ಲವೇ ಸಹಿ ಒಳಗೊಂಡ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಸೂಚಿಸಿದ್ದರು' ಎಂಬ ಅಂಶ ನೋಟಿಸ್ನಲ್ಲಿದೆ.
ರಾಯ್ ಬರೇಲಿಯ ಚುನಾವಣಾ ಅಕ್ರಮದ ಬಗ್ಗೆ ಬಿಜೆಪಿಯ ಅನುರಾಗ್ ಠಾಕೂರ್ ಅವರು ಆರೋಪಿಸಿದಾಗ ಸಿಇಸಿ ಏಕೆ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಲಿಲ್ಲ ಎಂದು ವಿಪಕ್ಷಗಳು ಪ್ರಶ್ನಿಸಿವೆ.
Quote- ನಾವು ಸೂಕ್ತ ನಿರ್ಧಾರಕ್ಕೆ ಕಾಯುತ್ತಿದ್ದೇವೆ. ನೋಟಿಸ್ಗಳನ್ನು ಸರ್ಕಾರ ಕೈಗೆತ್ತಿಕೊಳ್ಳದಿದ್ದರೆ ಆಡಳಿತ ಮತ್ತು ಸಿಇಸಿ ನಡುವಿನ ಗೋಪ್ಯ ಒಪ್ಪಂದ ಕುರಿತ ಅನುಮಾನ ಇನ್ನಷ್ಟು ಹೆಚ್ಚಾಗಲಿದೆ- ಡರೇಕ್ ಒಬ್ರೆಯಾನ್ ಲೋಕಸಭೆಯಲ್ಲಿ ಟಿಎಂಸಿ ನಾಯಕ.

