ನವದೆಹಲಿ: ಕಾನೂನು ಪದವಿಯ ಅವಧಿಯನ್ನು ಐದು ವರ್ಷದಿಂದ ನಾಲ್ಕು ವರ್ಷಕ್ಕೆ ಇಳಿಸಬೇಕು ಎಂಬ ಕುರಿತು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಏಪ್ರಿಲ್ನಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ವಕೀಲ ಅಶ್ವಿನಿ ಉಪಾಧ್ಯಾಯ ಅವರು ಪಿಐಎಲ್ ಸಲ್ಲಿಸಿದ್ದಾರೆ.
ಭಾರತದ ಕಾನೂನು ಪಠ್ಯಕ್ರಮವನ್ನು ಪರಿಶೀಲಿಸಬೇಕು. ಇದಕ್ಕಾಗಿ ಅತ್ಯುನ್ನತ ನ್ಯಾಯಶಾಸ್ತ್ರತಜ್ಞರನ್ನು ಒಳಗೊಂಡ ಸಮಿತಿ ರಚಿಸಿ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಲ್ಯಾ ಬಾಗ್ಚಿ ಅವರ ಪೀಠವು ಅರ್ಜಿಯ ವಿಚಾರಣೆ ನಡೆಸುವುದಾಗಿ ಹೇಳಿದೆ.
'ಇತರೆ ಹಲವು ದೇಶಗಳಲ್ಲಿ 12ನೇ ತರಗತಿಯ ಬಳಿಕ ಕಾನೂನು ಪದವಿಯ ಅವಧಿಯು ನಾಲ್ಕು ವರ್ಷವಿದೆ. ನಮ್ಮಲ್ಲಿ ಐದು ವರ್ಷವಿದೆ. ಆದರೂ ಪ್ರಾಯೋಗಿಕ ಜ್ಞಾನ ಇಲ್ಲದೆಯೇ ಶಿಕ್ಷಣ ಮುಗಿದು ಹೋಗುತ್ತದೆ. ಈಗಿರುವ ಐದು ವರ್ಷದ ಶಿಕ್ಷಣವು ಅತ್ಯುನ್ನತ ವಕೀಲರನ್ನು ತಯಾರಿಸುವಲ್ಲಿ ಸೋತಿದೆ' ಎಂದು ಅರ್ಜಿಯಲ್ಲಿ ಹೇಳಲಾಗಿದೆ.
'ನಮ್ಮ ದೃಷ್ಟಿಕೋನವನ್ನು ಮಾತ್ರವೇ ನಂಬಲು ಸಾಧ್ಯವಿಲ್ಲ. ಶಿಕ್ಷಣ ತಜ್ಞರು, ನ್ಯಾಯಶಾಸ್ತ್ರ ತಜ್ಞರು, ವಕೀಲರು, ಸಾಮಾಜಿಕ ಮತ್ತು ನೀತಿ ರೂಪಿಸುವ ಸಂಶೋಧಕರು ಎಲ್ಲರೂ ಇದ್ದಾರೆ. ಇವರೂ ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಳ್ಳಬೇಕಾಗುತ್ತದೆ' ಎಂದು ಸಿಜೆಐ ಸೂರ್ಯಕಾಂತ್ ಅಭಿಪ್ರಾಯಪಟ್ಟರು.

