ಬದಿಯಡ್ಕ: ದೇವಾಲಯಗಳ ರೀತಿ ರಿವಾಜುಗಳನ್ನು ಕಾಪಾಡಿಕೊಂಡು ಬರುವುದು ನಮ್ಮ ಆದ್ಯ ಕರ್ತವ್ಯ. ವ್ಯವಸ್ಥೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಉದನೇಶ್ವರನ ಇಚ್ಛೆ, ಅನುಗ್ರಹದಿಂದ ಪೆರಡಾಲ ಕ್ಷೇತ್ರವು ಜೀರ್ಣೋದ್ಧಾರಗೊಂಡು ಸುಂದರವಾಗಿ ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗಿದೆ. ಚಪ್ಪರ ಮುಹೂರ್ತ ನಡೆದರೆ ಅಲ್ಲಿ ಉತ್ಸವದ ಕಳೆ ಆರಂಭವಾದಂತೆ. ಭಗವದ್ಭಕ್ತರ ಒಡಗೂಡುವಿಕೆಯಿಂದ ನಿರ್ಮಾಣಗೊಂಡ ಕ್ಷೇತ್ರದ ಬ್ರಹ್ಮಕಲಶೋತ್ಸವದಲ್ಲಿ ಎಲ್ಲರೂ ಜೊತೆಗೂಡಿ ಪಾಲ್ಗೊಳ್ಳಬೇಕು. ನೂತನ ಪರಾಭವ ಸಂವತ್ಸರ ಆರಂಭವಾಗಿದೆ. ಧರ್ಮಕ್ಕೆ ವಿರುದ್ಧವಾಗಿರುವ ಶಕ್ತಿಗಳಿಗೆ ಪರಾಭವ ಉಂಟಾಗಲಿ ಎಂದು ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಏಪ್ರಿಲ್ 17 ರಿಂದ ಏಪ್ರಿಲ್ 28ರ ತನಕ ಜರಗಲಿದ್ದು ಪೂರ್ವಭಾವಿಯಾಗಿ ಶುಕ್ರವಾರ ಚಪ್ಪರ ಮುಹೂರ್ತ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಪ್ರಧಾನ ಅರ್ಚಕ ವೇದಮೂರ್ತಿ ಶಿವರಾಮ ಭಟ್ ಪೆರಡಾಲ ಪೂಜಾದಿ ಕಾರ್ಯಗಳನ್ನು ನೆರವೇರಿಸಿದರು. ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ರೈ, ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಸೇವಾಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಸೂರ್ಯನಾರಾಯಣ ಬಿ., ಆಡಳಿತ ಸಮಿತಿ ಸದಸ್ಯ ಸೀತಾರಾಮ ನವಕಾನ, ಉಪಾಧ್ಯಕ್ಷರುಗಳಾದ ಪಿ.ಜಿ.ಚಂದ್ರಹಾಸ ರೈ, ತಿರುಪತಿ ಕುಮಾರ ಭಟ್, ಜೊತೆಕಾರ್ಯದರ್ಶಿಗಳಾದ ಉದಯಶಂಕರ ಪಿ.ಎಸ್., ಗಣೇಶ್ಪ್ರಸಾದ ಕಡಪ್ಪು, ಸತೀಶ ಪುದ್ಯೋಡು, ಡಾ.ಶ್ರೀಶಕುಮಾರ ಪಂಜಿತ್ತಡ್ಕ, ಲೆಕ್ಕಪರಿಶೋಧಕ ಕುಞ್ಞಣ್ಣ ಬದಿಯಡ್ಕ, ಶಿವಶಕ್ತಿ ಕ್ಲಬ್ಬಿನ ಸದಸ್ಯರು, ಭಗವದ್ಭಕ್ತರು ಪಾಲ್ಗೊಂಡಿದ್ದರು. ಬ್ರಹ್ಮಕಲಶೋತ್ಸವ ಚಪ್ಪರ ಸಮಿತಿಯ ಅಧ್ಯಕ್ಷ ಭಾಸ್ಕರ ಪಂಜಿತ್ತಡ್ಕ, ಸಂದೀಪ್ ಪೆರಡಾಲ, ವೆಂಕಟ್ರಮಣ ಭಟ್ ಪುದ್ಯೋಡು ಹಾಗೂ ಸದಸ್ಯರು ನೇತೃತ್ವ ವಹಿಸಿದ್ದರು. ಚಪ್ಪರ ವಹಿಸಿಕೊಂಡ ಶಿವಪ್ರಸಾದ್ ಹೆಗ್ಡೆ ಮಂಗಳೂರು ಅವರಿಗೆ ಶ್ರೀಗಳು ಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು.




