ನವದೆಹಲಿ: 'ನಗರ ಅನಿಲ ವಿತರಣಾ' (ಸಿಜಿಡಿ) ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕೇಂದ್ರ ಸರ್ಕಾರ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಸೂಚನೆ ನೀಡಿದೆ.
ಅಲ್ಲದೆ, ಅನಿಲ ವಿತರಣಾ ಜಾಲವನ್ನು ಸುವ್ಯವಸ್ಥಿತಗೊಳಿಸುವಂತೆಯೂ ಸೂಚಿಸಿದೆ.
ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿ ಭೌಗೋಳಿಕ ರಾಜಕೀಯದಲ್ಲಿ ಕಂಡುಬರುತ್ತಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದ್ರವೀಕೃತ ಪೆಟ್ರೋಲಿಯಂ ಅನಿಲ(ಎಲ್ಪಿಜಿ) ಪೂರೈಕೆ ಸುಗಮವಾಗುವುದನ್ನು ಖಾತ್ರಿ ಪಡಿಸುವುದಕ್ಕಾಗಿ ಈ ಕ್ರಮ ಕೈಗೊಂಡಿದೆ.
'ಸಿಜಿಡಿ ಯೋಜನೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು 10 ದಿನಗಳ ಒಳಗಾಗಿ ವಿಲೇವಾರಿ ಮಾಡಬೇಕು. ಇದರಿಂದ ಪಿಎನ್ಜಿ ಪೂರೈಕೆಗೆ ವೇಗ ಸಿಗಲಿದೆ' ಎಂದು ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಘಟನೆಯು (ಪಿಇಎಸ್ಒ) ತನ್ನ ಕಚೇರಿಗಳಿಗೆ ನಿರ್ದೇಶನ ನೀಡಿದೆ.
ಎಲ್ಪಿಜಿ ಬದಲು 'ಕೊಳವೆ ಮೂಲಕ ಅನಿಲ'(ಪಿಎನ್ಜಿ) ಬಳಕೆಗೆ ಒತ್ತು ನೀಡುವಂತೆ ಕೇಂದ್ರ ಸರ್ಕಾರ ಗ್ರಾಹಕರನ್ನು ಉತ್ತೇಜಿಸುತ್ತಿದೆ. ಅದರಲ್ಲೂ, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿನ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬಳಸುವವರು ಪಿಎನ್ಜಿ ಬಳಸುವಂತೆ ಪ್ರೋತ್ಸಾಹಿಸುತ್ತಿದೆ.
ಮುಂಬರುವ ದಿನಗಳಲ್ಲಿ ಎಲ್ಪಿಜಿ ಮೇಲಿನ ಅವಲಂಬನೆ ತಗ್ಗಿಸುವುದು ಇದರ ಉದ್ದೇಶ ಎಂದು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ ಹೇಳಿದೆ.

