ಕಾಸರಗೋಡು: ಜಿಲ್ಲೆಯಲ್ಲೂ ಎಲ್ಪಿಜಿ ಸಿಲಿಂಡರ್ ಸಮಸ್ಯೆ ಕಾಡಲಾರಂಭಿಸಿದ್ದು, ಜನತೆ ಗ್ಯಾಸ್ ಸಿಲಿಂಡರ್ಗಾಗಿ ಪರದಾಡಲಾರಂಭಿಸಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ಕಂಡುಬಂದಿದ್ದು, ಕೆಲವು ಹೋಟೆಲ್ಗಳು ಈ ಹಿಂದಿನ ಕಟ್ಟಿಗೆ ಒಲೆಗಳ ಮೊರೆಹೋಗುತ್ತಿದೆ.
ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧೀನದಲ್ಲಿ ಚಟುವಟಿಕೆ ನಡೆಸುತ್ತಿರುವ ಕುಟುಂಬಶ್ರೀ ಕೆಫೆಯಲ್ಲಿ ಬುಧವಾರದಿಂದ ಒಲೆಯಲ್ಲಿ ಸೌದೆ ಬಳಸಿ ಅಡುಗೆ ಆರಂಭಿಸಲಾಗಿದೆ. ಅಡುಗೆ ಅನಿಲ ಪೂರೈಕೆಯಾಗದ ಹಿನ್ನೆಲೆಯಲ್ಲಿ ಕಟ್ಟಿಗೆ ಒಲೆಯನ್ನು ಆಶ್ರಯಿಸಬೇಕಾಗಿ ಬಂದಿರುವುದಾಗಿ ಕುಟುಂಬಶ್ರೀ ಕೆಫೆ ನೌಕರರು ತಿಳಿಸುತ್ತಾರೆ. ಕೆಲವೊಂದು ದೇವಾಲಯಗಳಲ್ಲಿ ಆಹಾರ, ಪ್ರಸಾದ ತಯಾರಿಗೆ ಗ್ಯಾಸ್ ಬಳಸುತ್ತಿದ್ದು, ಏಕಾಏಕಿ ಪೂರೈಕೆ ಮೇಲೆ ನಿಯಂತ್ರಣ ಹೇರಿರುವುದರಿಂದ ಸಮಸ್ಯೆ ಎದುರಿಸಬೇಕಾಗಿದೆ.
ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ಭೋಜನ, ಅಪ್ಪ ಸೇರಿದಂತೆ ಪ್ರಸಾದ ತಯಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಇಂಧನ ಬಳಕೆಯಾಗುತ್ತಿದೆ. ದೇವಾಲಯದಲ್ಲಿ ಗ್ಯಾಸ್ ಮತ್ತು ಕಟ್ಟಿಗೆಯನ್ನು ಸಮಾನವಾಗಿ ಬಳಕೆ ಮಾಡುತ್ತಿರುವುದರಿಮದ ಹೆಚ್ಚಿನ ಸಮಸ್ಯೆ ತಲೆದೋರಿಲ್ಲ. ಕಟ್ಟಿಗೆಯೂ ಲಭ್ಯವಿರುವುದರಿಂದ ಗ್ಯಾಸ್ ಬಳಕೆ ಒಂದಷ್ಟು ಕಡಿಮೆ ಮಾಡಿ, ಕಟ್ಟಿಗೆ ಮೂಲಕ ಆಹಾರ, ಪ್ರಸಾದ ತಯಾರಿಗೆ ಆದ್ಯತೆ ನೀಡಲಾಗುವುದು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ. ಜಗದೀಶ್ ಪ್ರಸಾದ್ 'ಸಮರಸ ಸುದ್ದಿ'ಗೆ ತಿಳಿಸಿದ್ದಾರೆ.

