ಗುವಾಹಟಿ: ಮಣಿಪುರದ ಉಖರಲ್ ಜಿಲ್ಲೆಯಲ್ಲಿ ಪ್ರಯಾಣಿಕ ವಾಹನವೊಂದರ ಮೇಲೆ ಕುಕಿ ಸಮುದಾಯದ ಶಂಕಿತ ಭಯೋತ್ಪಾದಕರು ಶನಿವಾರ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ನಾಗಾ ಸಮುದಾಯಕ್ಕೆ ಸೇರಿದ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ನಾಗಾ ಸಮುದಾಯ ಬಾಹುಳ್ಯದ ಉಖರಲ್ ಜಿಲ್ಲೆಗೆ ಶಾಂತಿ ಯೋಜನೆಯ ಭಾಗವಾಗಿ ಮುಖ್ಯಮಂತ್ರಿ ವೈ.ಖೇಮಚಂದ್ ಸಿಂಗ್ ಅವರು ಶುಕ್ರವಾರವಷ್ಟೇ ಪ್ರವಾಸ ಕೈಗೊಂಡಿದ್ದರು. ಮರು ದಿನವೇ ಈ ಘಟನೆ ನಡೆದಿದೆ.
ಕಳೆದೊಂದು ತಿಂಗಳಿಂದ ಕುಕಿ ಮತ್ತು ನಾಗಾ ಸಮುದಾಯದ ನಡುವಿನ ಸಂಘರ್ಷ ತೀವ್ರಗೊಂಡಿರುವ ಕಾರಣ ಎನ್ಎಚ್-202 ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ರಕ್ಷಣೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ಸಿಂಗ್ ಶುಕ್ರವಾರ ಅಧಿಕಾರಿಗಳಿಗೆ ನಿರ್ದೇಶಿಸಿದ್ದರು.
ದಾಳಿ ನಡೆಸಿರುವುದು ಕುಕಿ ಸಮುದಾಯದ ಸಂಘಟನೆಗಳೇ ಎಂಬ ಶಂಕೆ ವ್ಯಕ್ತವಾಗುತ್ತಿದ್ದಂತೆಯೇ ಕುಕಿ ಜೊ ಸಮಿತಿ (ಕೆಝೆಡ್ಸಿ) ಆರೋಪಗಳನ್ನು ತಿರಸ್ಕರಿಸಿದೆ. ಯಾವುದೇ ಸಾಕ್ಷಿ- ಆಧಾರಗಳಿಲ್ಲದೇ ಆರೋಪ ಮಾಡುವುದು ಸಲ್ಲದು ಎಂದೂ ಸಮುದಾಯ ಹೇಳಿದೆ.
ಏಪ್ರಿಲ್ 7ರಂದು ಮೈತೇಯಿ ಬಾಹುಳ್ಯದ ವಿಷ್ಣುಪುರ ಜಿಲ್ಲೆಯಲ್ಲಿ ಬಿಎಸ್ಎಫ್ ಯೋಧರೊಬ್ಬರ ಇಬ್ಬರು ಮಕ್ಕಳನ್ನು ಹತ್ಯೆ ಮಾಡಲಾಗಿತ್ತು. ಕುಕಿ ಸಮುದಾಯದ ಭಯೋತ್ಪಾದಕರೇ ಈ ಕೃತ್ಯ ಎಸಗಿದ್ದಾರೆಂದು ಆರೋಪಿಸಿ ಮೈತೇಯಿ ಮಹಿಳಾ ಸಂಘಟನೆಯೊಂದು ಪ್ರತಿಭಟನೆ ನಡೆಸುತ್ತಿದೆ. ಇದೀಗ ಆ ಸಂಘಟನೆಯು ಪ್ರತಿಭಟನೆಯ ಭಾಗವಾಗಿ ಮುಂದಿನ 5 ದಿನ ಮಣಿಪುರದಾದ್ಯಂತ ಸಂಪೂರ್ಣ ಬಂದ್ಗೆ ಕರೆ ನೀಡಿದೆ.

