ಕಾಸರಗೋಡು: ವಿದ್ಯಾನಗರ ಸಿವಿಲ್ ಸ್ಟೇಷನ್ನಲ್ಲಿ ವ್ಯಾಪಕ ಶುಚೀಕರಣ ಚಟುವಟಿಕೆ ಆರಂಭಗೊಂಡಿತು. ಸಿವಿಲ್ ಸ್ಟೇಷನ್ನಲ್ಲಿ ವಿವಿಧ ಕಚೇರಿ ಹಾಗೂ ಆಸುಪಾಸು ಶುಚೀಕರಣಕಾರ್ಯವನ್ನು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಹೆಚ್ಚುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ಪರಿಸರಕ್ಕೆ ಭಾರೀ ಅಪಾಐ ತಂದೊಡ್ಡುತ್ತಿದ್ದು, ಪ್ಲಾಸ್ಟಿಕ್ ಬಳಕೆಗೆ ಇತಿಶ್ರೀ ಹಾಡುವುದರ ಜತೆಗೆ ಸ್ವಚ್ಛತಾ ಕಾರ್ಯಗಳಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸುವಂತೆ ಸಲಹೆನೀಡಿದರು.
ಚೆಂಗಳ ಗ್ರಾಮ ಪಂಚಾಯಿತಿ, ಜಿಲ್ಲಾ ಸ್ವಚ್ಛತಾ ಮಿಷನ್ ಮತ್ತು ಹಸಿರು ಕ್ರಿಯಾ ಸೇನೆಯ ಸದಸ್ಯರ ಸಹಯೋಗದೊಂದಿಗೆ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಕಾರ್ಯಕ್ರಮದ ಅಂಗವಾಗಿ ಮೇ 8 ರಂದು ಸಿವಿಲ್ ಸ್ಟೇಷನ್ನ ಎಲ್ಲಾ ಕಚೇರಿಗಳ ಎಲೆಕ್ಟ್ರಾನಿಕ್ ಸಾಧನಗಳನ್ನು ಸ್ವಿಚ್ ಆಫ್ ಮಾಡಿ, ಶುಚೀಕರಿಸಿದ ನಂತರ ಹೊರಬೀಳುವ ತ್ಯಾಜ್ಯವನ್ನು ಸಂಗ್ರಹಿಸಿ ಕ್ಲೀನ್ ಕೇರಳ ಕಂಪನಿಗೆ (ಸಿಕೆಸಿಎಲ್) ಹಸ್ತಾಂತರಿಸಲಾಗುವುದು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ ಅಜಕೋಡ್ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ)ಕೆ.ವಿ. ಶ್ರುತಿ, ಸಹಾಯಕ ಜಿಲ್ಲಾಧಿಕಾರಿಗಳಾದ ಲಿಪು ಎಸ್.ಲಾರೆನ್ಸ್, ವಿ.ಪಿ. ರಘುಮಣಿ, ಹುಜೂರ್ ಶಿರಸ್ತೇದಾರ್ ಸತೀಶ್ ಕುಮಾರ್, ಸ್ವಚ್ಛತಾ ಮಿಷನ್ ಜಿಲ್ಲಾ ಸಂಯೋಜಕ ಪಿ.ಜಯನ್, ಚೆಂಗಳ ಗ್ರಾಮ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಶಾಂತಕುಮಾರಿ ಟೀಚರ್, ವಾರ್ಡ್ ಸದಸ್ಯರಾದ ಮಾಹಿನ್ ಆಲಂಪಾಡಿ, ಇ.ಎ. ಮಹಮೂದ್, ಮತ್ತು ವಿ.ಎ. ಮುಹಮ್ಮದ್ ಹನೀಫಾ ಉಪಸ್ಥಿತರಿದ್ದರು. ಆರೋಗ್ಯ ನಿರೀಕ್ಷಕರಾದ ಕೆ.ವಿ. ಗೋಪಿನಾಥ್, ಕೆ.ರಶ್ಮಿ, ಎಂ.ಸಿ. ಬಶೀರ್ ಮತ್ತು ವಿವಿಧ ಇಲಾಖೆಗಳ ನೌಕರರು ಸ್ವಚ್ಛತಾ ಕಾರ್ಯಗಳ ನೇತೃತ್ವ ವಹಿಸಿದ್ದರು.



