ಮಲಪ್ಪುರಂ: ಚುನಾವಣೆಗೆ ಸಂಬಂಧಿಸಿದಂತೆ ನಡೆಸಿದ ಶಪಥದಲ್ಲಿ ಸೋತ ಹೈನುಗಾರ ಮತ್ತು ಸಿಪಿಎಂ ಬೆಂಬಲಿಗನೊಬ್ಬ ತನ್ನ ಹಾಲು ನೀಡುವ ಹಸುವನ್ನು ಮುಸ್ಲಿಂ ಲೀಗ್ ಕಾರ್ಯಕರ್ತನಿಗೆ ನೀಡಿದ್ದಾನೆ. ಎಲ್ಡಿಎಫ್ ಸರ್ಕಾರ ಪತನಗೊಂಡರೆ ತಾನು ಹಸುವನ್ನು ನೀಡುತ್ತೇನೆ ಎಂಬುದು ಶಪಥವಾಗಿತ್ತು. ನೀರಮರುತ್ತೂರ್ ಪತಂಬಾಡ್ನ ಸ್ಥಳೀಯ ಕೆ. ಮಹೇಶ್, ವೆಟ್ಟಂ ಪಂಚಾಯತ್ನ ಕಣ್ಣೂರು ಮೂಲದ ಕುನ್ನತ್ ಮುಸ್ತಫಾ ಅವರೊಂದಿಗೆ ಶಪಥ ಒಡ್ಡಿದ್ದರು.
ಎಡ ಸರ್ಕಾರ ಜಾರಿಗೆ ತಂದ ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳು ಮತಗಳಾಗಿ ಪರಿವರ್ತನೆಯಾಗುತ್ತವೆ ಎಂದು ಮಹೇಶ್ ಆಶಿಸಿದ್ದರು. ಇದು ನಿರಂತರ ಆಡಳಿತಕ್ಕೆ ಕಾರಣವಾಗುತ್ತದೆ ಎಂದು ಅವರು ಭಾವಿಸಿದ್ದರು. ಇದು ಸಂಭವಿಸದಿದ್ದರೆ, ತನ್ನ ಐದು ಹಾಲು ನೀಡುವ ಹಸುಗಳಲ್ಲಿ ಯಾವುದಾದರೂ ಒಂದನ್ನು ಮುಸ್ತಫಾಗೆ ನೀಡುವುದಾಗಿ ಅವರು ಹೇಳಿದ್ದರು. ಮುಸ್ತಫಾ ಅವರು ಕೂಡಾ ಯುಡಿಎಫ್ ಗೆಲ್ಲದಿದ್ದರೆ ತನ್ನ ಹಸುವನ್ನು ಸಹ ನೀಡುವುದಾಗಿ ಪ್ರತಿ ಶಪಥ ಹಾಕಿದ್ದರು. ಚುನಾವಣಾ ಫಲಿತಾಂಶಗಳು ಹೊರಬಂದಾಗ, ಮಹೇಶ್ ತನ್ನ ಭರವಸೆಯನ್ನು ಉಳಿಸಿಕೊಂಡರು ಮತ್ತು ಮುಸ್ತಫಾ ಅವರಿಗೆ ಪೋನ್ನಲ್ಲಿ ಕರೆ ಮಾಡಿ ಹಸುವನ್ನು ನೀಡುವುದಾಗಿ ಹೇಳಿದರು.
ನಂತರ, ಅವರು ಮಹೇಶ್ ಅವರ ಮನೆಗೆ ತಲುಪಿದಾಗ, ಮುಸ್ತಫಾ ಅವರನ್ನು ಗೋಶಾಲೆಗೆ ಕರೆದೊಯ್ದು ಅಲ್ಲಿಂದ ಒಂದು ಹಸುವನ್ನು ಆಯ್ಕೆ ಮಾಡಲು ಕೇಳಲಾಯಿತು. ಮುಸ್ತಫಾ ನಾಲ್ಕು ವರ್ಷದ ಹಾಲು ಹಸುವನ್ನು ಆಯ್ಕೆ ಮಾಡಿದರು. ಸುಮಾರು 65,000 ರೂ. ಬೆಲೆಬಾಳುವ ಈ ಹಸು ದಿನಕ್ಕೆ ಎರಡು ಬಾರಿ 16 ಲೀಟರ್ ಹಾಲು ನೀಡುತ್ತದೆ ಎಂದು ಮಹೇಶ್ ಮಾಹಿತಿ ನೀಡಿದರು. ಮುಸ್ತಫಾ ಅವರು ತಮ್ಮ ಜಮೀನಿನಲ್ಲಿ ಹಸುವನ್ನು ಸಾಕುವುದಾಗಿ ಹೇಳಿರುವರು.

