ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ದೆಹಲಿ ಹೈಕೋರ್ಟ್ ಸೋಮವಾರ(ಜೂನ್ 1) ಆದೇಶ ನೀಡಿದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ಭೌತ ವಿಜ್ಞಾನ ಅನುವಾದಕ ಮನೀಷ್ ಸಂಜಯ್ ಹವಾಲ್ದಾರ್, ಡಾ.ಮನೋಜ್ ಶಿರೂರೆ ಮತ್ತು ಭೌತ ವಿಜ್ಞಾನ ಶಿಕ್ಷಕ ತೇಜಸ್ ಹರ್ಷದ್ಕುಮಾರ್ ಶಾ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಮೂರ್ತಿ ಅಜಯ್ ಗುಪ್ತಾ ಅವರ ಪೀಠವು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹವಾಲ್ದಾರ್ ಅವರು ಇತರ ಆರೋಪಿಗಳೊಂದಿಗೆ ಸೇರಿ, ಯಾವುದೇ ಅಧಿಕೃತ ಅನುಮತಿಯಿಲ್ಲದೆ ನೀಟ್ ಪರೀಕ್ಷೆಯ ಪಶ್ನೆ ಪತ್ರಿಕೆಯನ್ನು ಹಣಕ್ಕಾಗಿ ವಿತರಿಸಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು.
ಲಾತೂರ್ನಲ್ಲಿ ನೀಟ್ ಪರೀಕ್ಷೆಯ ರಾಸಾಯನ ವಿಜ್ಞಾನ ಪಶ್ನೆ ಪತ್ರಿಕೆ ಸೋರಿಕೆಯ ಹಿಂದೆ ಮನೋಜ್ ಶಿರೂರೆ ಅವರು ಪ್ರಮುಖ ಪಾತ್ರ ವಹಿಸಿದ್ದರು. ಪುಣೆ ಮೂಲದ ಕೋಚಿಂಗ್ ಸೆಂಟರ್ನಲ್ಲಿ ಭೌತ ವಿಜ್ಞಾನ ಶಿಕ್ಷಕರಾಗಿರುವ ತೇಜಸ್ ಹರ್ಷದ್ಕುಮಾರ್ ಶಾ ಅವರು ಹವಾಲ್ದಾರ್ರಿಂದ ಭೌತ ವಿಜ್ಞಾನ ಪ್ರಶ್ನೆ ಪತ್ರಿಕೆಯನ್ನು ಪಡೆದುಕೊಂಡಿದ್ದರು ಎಂದು ಸಿಬಿಐ ತಿಳಿಸಿದೆ.
ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದರಿಂದ, ಎನ್ಟಿಎ ಮೇ 12ರಂದು ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಜೂನ್ 21ಕ್ಕೆ ಮರುಪರೀಕ್ಷೆಯನ್ನು ನಿಗದಿಗೊಳಿಸಲಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ ಇದುವರೆಗೂ 13 ಆರೋಪಿಗಳನ್ನು ಬಂಧಿಸಿದೆ.

