ಕೋಲ್ಕತ್ತ: ರಾಜ್ಯದ ಗಡಿ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿರುವ ಬಂಧನ ಕೇಂದ್ರಗಳಿಂದ 4,800 ಮಂದಿ ಅಕ್ರಮ ವಲಸಿಗರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹೇಳಿದ್ದಾರೆ. ಇನ್ನೂ 836 ಮಂದಿ ಗಡೀಪಾರಿಗೆ ಕಾಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಕ್ರಮ ವಲಸೆ ರಾಜ್ಯದ ಒಂದು ದೊಡ್ಡ ಸಮಸ್ಯೆಯಾಗಿದೆ ಎಂದು ಪ್ರತಿಪಾದಿಸಿರುವ ಅಧಿಕಾರಿ, ಭಾರತ-ಬಾಂಗ್ಲಾದೇಶ ಗಡಿಯನ್ನು ಸುರಕ್ಷಿತಗೊಳಿಸುವ ದೃಷ್ಟಿಯಿಂದ ಸುಮಾರು 100 ಕಿ.ಮೀ. ಬೇಲಿ ನಿರ್ಮಿಸಲು ಭೂಮಿಯನ್ನು ತಮ್ಮ ಸರ್ಕಾರ ಈಗಾಗಲೇ ಬಿಎಸ್aಎಫ್ಗೆ ಹಸ್ತಾಂತರಿಸಿದೆ ಎಂದು ಹೇಳಿದ್ದಾರೆ.
ಅಂತರರಾಷ್ಟ್ರೀಯ ಗಡಿಯನ್ನು ಸುರಕ್ಷಿತಗೊಳಿಸುವುದು ರಾಜ್ಯ ಸರ್ಕಾರದ ಆದ್ಯತೆಯಾಗಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯಡಿಯಲ್ಲಿ ಬರದ ಅಕ್ರಮ ವಲಸಿಗರನ್ನು ತಮ್ಮ ಸರ್ಕಾರ ಗಡೀಪಾರು ಮಾಡಲು ಆರಂಭಿಸಿದೆ ಎಂದ ಅಧಿಕಾರಿ, ಈ ಜನರನ್ನು ನೇರವಾಗಿ ಬಿಎಸ್ಎಫ್ಗೆ ಹಸ್ತಾಂತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ದೇಶದ ಇತರ ರಾಜ್ಯಗಳಲ್ಲಿ ಈ ಕಾನೂನನ್ನು ಅನ್ವಯಿಸಲಾಗಿದ್ದರೂ, ಪಶ್ಚಿಮ ಬಂಗಾಳದ ಹಿಂದಿನ ತೃಣಮೂಲ ಕಾಂಗ್ರೆಸ್ ಸರ್ಕಾರ ಅದನ್ನು ಜಾರಿಗೆ ತಂದಿರಲಿಲ್ಲ, ಅಕ್ರಮ ವಲಸಿಗರನ್ನು ರಾಜ್ಯದ ಜೈಲುಗಳಲ್ಲಿ ಇರಿಸಿ, ತೆರಿಗೆದಾರರ ಹಣದಲ್ಲಿ ಸೌಲಭ್ಯ ನೀಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
'ರಾಜ್ಯದ ಗಡಿ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿತುವ ಬಂಧನ ಕೇಂದ್ರಗಳಿಂದ ಸುಮಾರು 4,800 ಅಕ್ರಮ ವಲಸಿಗರನ್ನು ವಾಪಸ್ ಕಳುಹಿಸಲಾಗಿದೆ. ಇನ್ನೂ 836 ಜನರು ಆ ಕೇಂದ್ರಗಳಲ್ಲಿ ಗಡೀಪಾರಿಗಾಗಿ ಕಾಯುತ್ತಿದ್ದಾರೆ' ಎಂದು ಅಧಿಕಾರಿ ಹೇಳಿದ್ದಾರೆ.

