ಕಾಸರಗೋಡು: ಸಮುದ್ರ ಕೊರೆತ ತೀವ್ರಗೊಳ್ಳುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಮಳೆಗಾಲ ಬಿರುಸುಗೊಳ್ಳುವ ಮೊದಲು ರಕ್ಷಣಾಕಾರ್ಯ ಕೈಗೊಳ್ಳುವಂತೆ ಶಾಸಕ ಕೆ. ನೀಲಕಂಠನ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಹಿಂದಿನ ವರ್ಷಗಳಲ್ಲಿ ಸಮುದ್ರ ಕೊರೆತದ ತೀವ್ರತೆಯನ್ನು ಪರಿಗಣಿಸಿ, ಈ ಪ್ರದೇಶದಲ್ಲಿ ಶಾಶ್ವತ ಪರಿಹಾರದ ಅಗತ್ಯವಿದೆ ಮತ್ತು ಅದಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಸಮುದ್ರ ಕೊರೆತ ಸಂಭವಿಸಿರುವ ತೃಕ್ಕನ್ನಾಡು ಪ್ರದೇಶದಲ್ಲಿ ತಜ್ಞರ ಪರಿಶೀಲನೆಯ ನಂತರ 50 ಲಕ್ಷ ರೂ. ಮಂಜೂರಾಗಿ ಲಭಿಸಿದ್ದು, ಅಲ್ಲಿ ಡಬಲ್ ಟ್ಯಾಂಪಿಂಗ್ ನಡೆಯುತ್ತಿದ್ದು, ಕಪ್ಪು ಕಲ್ಲಿನ ಕೊರತೆಯಿಂದಾಗಿ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಬೃಹತ್ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಮಾಹಿತಿ ನೀಡಿದರು. ಸಮುದ್ರಕೊರೆತದ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಬೇಕೆಂದು ಶಾಸಕರು ಸೂಚಿಸಿದರು. ಉದುಮ ಕ್ಷೇತ್ರದ ಪರಿಶಿಷ್ಟ ಜಾತಿ ಕುಟುಂಬಗಳಿಗೆ ಭೂ ಹಕ್ಕುಪತ್ರ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಶಾಸಕರು ನಿರ್ದೇಶನ ನೀಡಿದರು.
ಕುಂಡುಚಿ-ಕುಂಡಂಕುಳಿ ರಸ್ತೆಯ ನಿರ್ಮಾಣ ಕಾರ್ಯ ಆರಂಭಗೊಂಡು ವರ್ಷಗಳೇ ಕಳೆದರೂ, ರಸ್ತೆ ಡಾಂಬರೀಕರಣ ಕಾರ್ಯ ಪೂರ್ಣಗೊಂಡಿಲ್ಲ ಎಂದು ತಿಳಿಸಿದ ಅವರು, ಟಾಟಾ ಕೋವಿಡ್ ಆಸ್ಪತ್ರೆಗೆ ಕೇಂದ್ರದ ಹಣವನ್ನು ಸೇರಿಸಲಾಗಿದೆ. ಕ್ರಿಟಿಕಲ್ ಕೇರ್ ಆರಂಭಿಸಲಾಗುವುದು ಮತ್ತು ರಾಜ್ಯ ಸರ್ಕಾರ ಆಸ್ಪತ್ರೆಗೆ ಅನುಮತಿ ನೀಡಿದಲ್ಲಿ ಎರಡು ವರ್ಷಗಳಲ್ಲಿ ಕೆಲಸ ಪೂರ್ಣಗೊಳಿಸಬಹುದು ಎಂದು ಡಿಎಂಒ ಪ್ರಕಟಿಸಿದರು.

