ತಿರುವನಂತಪುರ: ಸರ್ಕಾರದ ಅಧಿಕೃತ ಕಾರ್ಯಕ್ರಮಗಳ ಆರಂಭದಲ್ಲಿ ಹಾಗೂ ಕೊನೆಯಲ್ಲಿ 'ವಂದೇ ಮಾತರಂ' ಗೀತೆಯ ಎಲ್ಲ ಐದು ಚರಣಗಳನ್ನು ಹಾಡುವ ಅನಿವಾರ್ಯತೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರಶ್ನಿಸಿದ್ದು, 'ಇದು ಅನಗತ್ಯ ಹೊರೆ' ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕನ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
'ವಂದೇ ಮಾತರಂ' ಹಾಡುವುದಕ್ಕೆ ಸಂಬಂಧಿಸಿದಂತೆ ಕೇರಳಂನಲ್ಲಿ ಎದ್ದಿರುವ ವಿವಾದದ ನಡುವೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್, 'ವಂದೇ ಮಾತರಂ ಗೀತೆಯನ್ನು ಎಲ್ಲರೂ ಗೌರವಿಸುತ್ತಾರೆ. ಆದರೆ ಪ್ರತಿ ಕಾರ್ಯಕ್ರಮದಲ್ಲಿ ಪೂರ್ಣವಾಗಿ ಹಾಡುವುದನ್ನು ಕಡ್ಡಾಯಗೊಳಿಸುವುದನ್ನು ಸಮರ್ಥಿಸುವುದು ಕಷ್ಟ' ಎಂದು ಹೇಳಿದರು.
'ವಂದೇ ಮಾತರಂ 'ರಾಷ್ಟ್ರೀಯ ಗೀತೆ'ಯಾಗಿದ್ದು, ಅದನ್ನು ಹಾಡುವಾಗ ನಾವು ಎದ್ದು ನಿಂತು ಗೌರವ ಸಲ್ಲಿಸುತ್ತೇವೆ. ಈ ಗೀತೆಯ ಮೊದಲ ಚರಣ ಅಥವಾ ಮೊದಲ ಕೆಲವು ಸಾಲುಗಳು ಹೆಚ್ಚಿನ ಜನರಿಗೆ ಕಂಠಪಾಠ ಆಗಿವೆ' ಎಂದರು.
'ಸಾಂಪ್ರದಾಯಿಕವಾಗಿ ಈ ಗೀತೆಯನ್ನು ಕಾರ್ಯಕ್ರಮದ ಆರಂಭದಲ್ಲಿ ಒಮ್ಮೆ ಹಾಡಲಾಗುತ್ತದೆ. ಆದರೆ, ಈಗ ಅವರು ಪ್ರತಿ ಕಾರ್ಯಕ್ರಮದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಗೀತೆಯ ಎಲ್ಲಾ ಐದು ಚರಣಗಳನ್ನು ಹಾಡಬೇಕೆಂದು ಬಯಸುತ್ತಾರೆ. ಅದು ಅನಗತ್ಯ ಹೊರೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.
'ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡುವುದು ಕಡ್ಡಾಯವಲ್ಲ ಎಂಬುದನ್ನು ಕೇರಳಂ ಸರ್ಕಾರ ಸಮರ್ಥಿಸಿಕೊಂಡಿದೆ. ಆದರೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಭಿನ್ನ ದೃಷ್ಟಿಕೋನ ಹೊಂದಿದಂತೆ ತೋರುತ್ತದೆ' ಎಂದು ತರೂರ್ ತಿಳಿಸಿದರು.
ಕೇರಳಂ ವಿಧಾನಸಭೆಯಲ್ಲಿ ಕಳೆದ ಶುಕ್ರವಾರ ಯುಡಿಎಫ್ ಸರ್ಕಾರದ ನೀತಿ ಘೋಷಣೆ ಕಾರ್ಯಕ್ರಮದಲ್ಲಿ 'ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಿಲ್ಲ' ಎಂದು ರಾಜ್ಯಪಾಲರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ರಾಷ್ಟ್ರೀಯ ಗೀತೆ ಹಾಡುವುದಕ್ಕೆ ತಮಗೆ ಯಾವುದೇ ಆಕ್ಷೇಪವಿಲ್ಲ ಎಂಬುದನ್ನು ಒತ್ತಿ ಹೇಳಿದ ತರೂರ್, 'ನಾವೆಲ್ಲರೂ ವಂದೇ ಮಾತರಂ ಗೀತೆಯನ್ನು ಗೌರವಿಸುತ್ತೇವೆ. ನಾನು ನಿಮಗಾಗಿ ಅದನ್ನು ಸಂತೋಷದಿಂದ ಹಾಡಬಲ್ಲೆ' ಎಂದರು.
ಶೆಹಜಾದ್ ಪೂನಾವಾಲಾ ಬಿಜೆಪಿ ರಾಷ್ಟ್ರೀಯ ವಕ್ತಾರವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡುವುದನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಗೀತೆಗೆ ಅಗೌರವ ತೋರಿಸಿದೆ.
ಕಾಂಗ್ರೆಸ್ ಮತ್ತೆ ಮುಸ್ಲಿಂ ಲೀಗ್ಗೆ ಶರಣು: ಬಿಜೆಪಿ
ನವದೆಹಲಿ: ಶಶಿ ತರೂರ್ ಹೇಳಿಕೆಯನ್ನು ಬಿಜೆಪಿ ಮಂಗಳವಾರ ಖಂಡಿಸಿದ್ದು 'ಕೇರಳಂನಲ್ಲಿ ಆಡಳಿತಾರೂಢ ಕಾಂಗ್ರೆಸ್ ಮಿತ್ರ ಪಕ್ಷವಾದ ಮುಸ್ಲಿಂ ಲೀಗ್ಗೆ ಮತ್ತೊಮ್ಮೆ 'ಶರಣಾಗಿದೆ' ಎಂದು ಆರೋಪಿಸಿದೆ. 'ಕಾಂಗ್ರೆಸ್ ಪಕ್ಷವು ರಾಷ್ಟ್ರೀಯತೆಗೆ ವಿರುದ್ಧವಾಗಿದೆ ಎಂಬುದನ್ನು ತೋರಿಸಿದೆ. ವಂದೇ ಮಾತರಂನ ಎಲ್ಲ ಚರಣಗಳನ್ನು ಹಾಡುವುದು ಅನಗತ್ಯ ಹೊರೆ ಎಂದು ಶಶಿ ತರೂರ್ ಹೇಳುತ್ತಾರೆ' ಎಂದು ಬಿಜೆಪಿಯು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. 'ವಂದೇ ಮಾತರಂ ಗೀತೆಯ ವಿಚಾರದಲ್ಲಿ ಕಾಂಗ್ರೆಸ್ ಈ ಹಿಂದೆಯೂ ಒತ್ತಡಕ್ಕೆ ಮಣಿದಿತ್ತು. ಮೊಹಮ್ಮದ್ ಅಲಿ ಜಿನ್ನಾ ಅವರ ಅತೀವ ಒತ್ತಡದಿಂದಾಗಿ ಹಾಗೂ ಮುಸ್ಲಿಮರನ್ನು ಓಲೈಸುವ ಉದ್ದೇಶದಿಂದ ಜವಾಹರ ಲಾಲ್ ನೆಹರೂ ಅವರೂ ಗೀತೆಯ ಕೆಲವು ಚರಣಗಳನ್ನು ಕೈಬಿಟ್ಟಿದ್ದರು. ಇದೀಗ ಕಾಂಗ್ರೆಸ್ ಮತ್ತೊಮ್ಮೆ ಮುಸ್ಲಿಂ ಲೀಗ್ ಮನಃಸ್ಥಿತಿಗೆ ಶರಣವಾಗಿದೆ. ಅದೇ ಮುಸ್ಲಿಂ ಲೀಗ್ ಜತೆ ಇಂದು ಅವರು ಕೇರಳಂನಲ್ಲಿ ಸರ್ಕಾರ ನಡೆಸುತ್ತಿದ್ದಾರೆ' ಎಂದು ಟೀಕಿಸಿದೆ. ರಾಷ್ಟ್ರೀಯತೆ ಮತ್ತು ರಾಷ್ಟ್ರೀಯ ಚಿಹ್ನೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಕಾಂಗ್ರೆಸ್ ದ್ವಿಮುಖ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದೆ.

