ಲಕ್ನೋ: ಲಕ್ನೋದ ಅಲಿಗಂಜ್ ಪ್ರದೇಶದಲ್ಲಿ ಸೋಮವಾರ 15 ಜನರನ್ನು ಬಲಿತೆಗೆದುಕೊಂಡ ಭೀಕರ ಅಗ್ನಿ ದುರಂತ ಸಂಭವಿಸಿದ ವಾಣಿಜ್ಯ ಕಟ್ಟಡದ ಮಾಲಿಕ ಈ ಹಿಂದೆ ಉತ್ತರ ಪ್ರದೇಶದ ಕಂಬೈನ್ಡ್ ಪ್ರಿ-ಮೆಡಿಕಲ್ ಟೆಸ್ಟ್ (ಸಿಪಿಎಂಟಿ) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೊಳಪಟ್ಟಿದ್ದ ಎಂದು ಬಲ್ಲ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ನಗರದಲ್ಲಿ ಇತ್ತೀಚಿನ ವರ್ಷಗಳ ಅತ್ಯಂತ ಭೀಕರ ಅಗ್ನಿ ದುರಂತಕ್ಕೆ ಕಾರಣಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದು, ಇದೀಗ ಮಾಲಿಕರ ಹಳೆಯ ಇತಿಹಾಸ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಅಗ್ನಿ ಅವಘಡಕ್ಕೀಡಾದ ಕಟ್ಟಡದ ಸಹಮಾಲಿಕರಲ್ಲಿ ಒಬ್ಬನಾಗಿರುವ ಸುರೇಂದ್ರ ಶುಕ್ಲಾ 2015ರ ಸಿಪಿಎಂಟಿ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದಲ್ಲಿ ಸಿಲುಕಿದ್ದ. ಆ ಸಮಯದಲ್ಲಿ ಶುಕ್ಲಾ ತನ್ನ ಪುತ್ರಿಗೆ ವೈದ್ಯಕೀಯ ಪ್ರವೇಶ ಪರೀಕ್ಷೆಯ ಮೂಲಕ ಸೀಟು ಗಿಟ್ಟಿಸಲು ಪ್ರಶ್ನೆಪತ್ರಿಕೆ ಸೋರಿಕೆಗೆ ಪಿತೂರಿ ನಡೆಸಿದ ಆರೋಪ ಕೇಳಿಬಂದಿತ್ತು.
ಪರೀಕ್ಷಾ ಕೇಂದ್ರದಲ್ಲಿ ಶುಕ್ಲಾನ ಪುತ್ರಿಗೆ ವಿಶೇಷ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗಿತ್ತು ಎಂಬ ದೂರುಗಳನ್ನೂ ತನಿಖಾಧಿಕಾರಿಗಳು ಪರಿಶೀಲಿಸಿದ್ದರು.
ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಪ್ರಕರಣವು ವ್ಯಾಪಕ ಗಮನ ಸೆಳೆದಿತ್ತು. ಆದರೆ ಪ್ರಕರಣದ ತನಿಖೆ ನಡೆಸಿದ್ದ ವಿಶೇಷ ಕಾರ್ಯಪಡೆಗೆ ಶುಕ್ಲಾ ವಿರುದ್ಧ ಪೂರಕ ಪುರಾವೆಗಳನ್ನು ಪತ್ತೆಹಚ್ಚಲು ಸಾಧ್ಯವಾಗದ ಕಾರಣ ಆತನ ಹೆಸರನ್ನು ನ್ಯಾಯಾಲಯವು ಕೈಬಿಟ್ಟಿತ್ತು.
ಶುಕ್ಲಾ ಮತ್ತು ಅವನ ಸೋದರ ವೀರೇಂದ್ರ ಶುಕ್ಲಾ ವಿರುದ್ಧ ಈ ಹಿಂದೆ ದೊಡ್ಡ ಪ್ರಮಾಣದ ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಸಂಬಂಧಿಸಿದಂತೆಯೂ ಆರೋಪಗಳು ಕೇಳಿಬಂದಿದ್ದವು.
ಅಗ್ನಿದುರಂತ ಸಂಭವಿಸಿದ ಕಟ್ಟಡದ ಸಹಮಾಲಿಕರಲ್ಲಿ ವೀರೇಂದ್ರ ಶುಕ್ಲಾ ಕೂಡ ಒಬ್ಬನಾಗಿದ್ದಾನೆ.
ಎಸ್ಐಟಿ ರಚನೆ
ಕಟ್ಟಡದ ಸುರಕ್ಷತಾ ಮಾನದಂಡಗಳ ಬಗ್ಗೆ ಪ್ರಶ್ನೆಗಳು ಎದ್ದ ಬೆನ್ನಲ್ಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಈ ಘಟನೆಯ ಬಗ್ಗೆ ವಿಶೇಷ ತನಿಖಾ ತಂಡದ (ಎಸ್ಐಟಿ) ತನಿಖೆಗೆ ಆದೇಶಿಸಿದ್ದಾರೆ. ಇಬ್ಬರು ಸದಸ್ಯರ ಎಸ್ಐಟಿಯು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಪ್ರವಾಸೋದ್ಯಮ ಇಲಾಖೆ) ಅಮೃತ್ ಅಭಿಜಾತ್ ಮತ್ತು ಲಕ್ನೋ ವಲಯದ ಎಡಿಜಿ ಪ್ರವೀಣ್ ಕುಮಾರ್ ಅವರನ್ನು ಒಳಗೊಂಡಿದೆ. ಏಳು ದಿನಗಳಲ್ಲಿ ವರದಿಯನ್ನು ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.
ನಾಲ್ವರ ಬಂಧನ
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ನಾಲ್ವರನ್ನು ಬಂಧಿಸಿದ್ದಾರೆ. ಇದೇ ವೇಳೆ ನಾಲ್ವರು ಸರಕಾರಿ ಅಧಿಕಾರಿಗಳನ್ನೂ ಅಮಾನತುಗೊಳಿಸಲಾಗಿದೆ.

