ತಿರುಚಿರಾಪಳ್ಳಿ: ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ತಮಿಳುನಾಡು ಮುಖ್ಯಮಂತ್ರಿ ಸಿ. ವಿಜಯ್ ಜೋಸೆಫ್ ಅವರು, ತಾವು ಮೊದಲು ಪ್ರಚಾರ ಆರಂಭಿಸಿದ ಸ್ಥಳಕ್ಕೆ ತೆರಳಿ ಧನ್ಯವಾದ ಸಲ್ಲಿಸಿದ್ದಾರೆ.
ಸೆಪ್ಟೆಂಬರ್ 2025ರಲ್ಲಿ ವಿಜಯ್ ಅವರು ತಿರುಚಿರಾಪಳ್ಳಿಯಲ್ಲಿ ಮೊದಲ ಬಾರಿಗೆ ಪಕ್ಷದ ಪರ ಪ್ರಚಾರ ನಡೆಸಿದ್ದರು.
ಇಂದು(ಸೋಮವಾರ) ತಿರುಚಿರಾಪಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ವಿಜಯ್ ಅವರನ್ನು ಸುತ್ತುವರಿದ ಜನರು, 'ವಿಜಯ್.. ವಿಜಯ್..' ಎಂದು ಹರ್ಷೋದ್ಗಾರ ಕೂಗಿ ಬರ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಭಾಷಣ ಪ್ರಾರಂಭಿಸಿದ ವಿಜಯ್ ಅವರು, ಧನ್ಯವಾದ ತಿಳಿಸಿದ್ದಾರೆ.
'ಇಷ್ಟು ವರ್ಷಗಳ ಕಾಲ ನಿಮಗೆ ವಂಚಿಸಿದ ಆ ಇಬ್ಬರನ್ನು(ಡಿಎಂಕೆ ಮತ್ತು ಎಐಎಡಿಎಂಕೆ) ನೀವು ನಿರ್ಲಕ್ಷಿಸಿದ್ದೀರಿ. ನೀವು ನನ್ನನ್ನು ವಿಜಯಶಾಲಿಯನ್ನಾಗಿ ಮಾಡಿದ್ದೀರಿ. ಇದಕ್ಕಾಗಿ ನಾನು ನಿಮಗೆ ಕೃತ್ಞನಾಗಿದ್ದೇನೆ' ಎಂದಿದ್ದಾರೆ.
'ಭವಿಷ್ಯದ ಚುನಾವಣೆಗಳಲ್ಲಿ ನಿಮ್ಮೆಲ್ಲರ ಬೆಂಬಲವನ್ನು ನಾನು ಪಡೆಯಬಲ್ಲೆ ಎಂದು ಬಲವಾಗಿ ನಂಬುತ್ತೇನೆ. ನಾನು ನೀಡುವ ಆಡಳಿತದ ಸ್ವರೂಪವನ್ನು ನೀವು ಶ್ಲಾಘಿಸುತ್ತೀರಿ ಎಂಬ ವಿಶ್ವಾಸ ನನಗಿದೆ' ಎಂದು ಹೇಳಿದ್ದಾರೆ.
ಇದೇ ವೇಳೆ ಅಧಿಕೃತ ಕಾರ್ಯಕ್ರಮಗಳಲ್ಲಿ ಸೂಟ್ ಧರಿಸುವ ತಮ್ಮ ಆಯ್ಕೆಯನ್ನು ಪ್ರಶ್ನಿಸಿದ ವಿರೋಧಿಗಳಿಗೆ ತಿರುಗೇಟು ನೀಡಿದ ಅವರು, 'ನನ್ನ ಸೂಟ್ ಬಣ್ಣ ಯಾವಾಗಲೂ ಕಪ್ಪು ಮತ್ತು ಬಿಳಿ ಆಗಿರುತ್ತದೆ. ಇದರ ಸಂದೇಶವೇನೆಂದರೆ ನಾನು ಪ್ರತಿಯೊಂದನ್ನೂ ಕಪ್ಪು ಮತ್ತು ಬಿಳಿಯಾಗಿಯೇ ನೋಡುತ್ತೇನೆ. ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ಬೇರೇನೂ ಇರುವುದಿಲ್ಲ' ಎಂದಿದ್ದಾರೆ.
ವಿಮಾನ ನಿಲ್ದಾಣದಿಂದ ಪ್ರಾರಂಭವಾದ ರೋಡ್ ಶೋ ಸೇಂಟ್ ಜೋಸೆಫ್ ಕಾಲೇಜಿನವರೆಗೆ ಸುಮಾರು 10 ಕಿಲೋಮೀಟರ್ ಸಾಗಿತು.
ವಿಜಯ್ ಅವರು ತಿರುಚಿರಾಪಳ್ಳಿ ಪೂರ್ವ ಮತ್ತು ಪೆರಂಬೂರ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಎರಡರಲ್ಲಿಯೂ ಜಯ ಗಳಿಸಿದ್ದರು. ತಿರುಚಿರಾಪಳ್ಳಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ. ಸದ್ಯದಲ್ಲೇ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ.

