ಇಂಫಾಲ: 2023ರ ಮೇ ತಿಂಗಳಲ್ಲಿ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬಳಿಕ ಪರಿಹಾರ ಶಿಬಿರಗಳು ಹಾಗೂ ತಾತ್ಕಾಲಿಕ ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಕನಿಷ್ಠ 731 ಮಂದಿ ನಿರಾಶ್ರಿತರು ಮೃತಪಟ್ಟಿದ್ದಾರೆ ಎಂದು ಆಂಗ್ಲ ದಿನಪತ್ರಿಕೆಯೊಂದು ವರದಿ ಮಾಡಿದೆ.
ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಲಭ್ಯವಾದ ಮಾಹಿತಿಯನ್ನು ಆಧರಿಸಿ ಈ ವರದಿ ಪ್ರಕಟಿಸಲಾಗಿದೆ.
ಈ ಮಾಹಿತಿಯನ್ನು ಬಹಿರಂಗಪಡಿಸುವಂತೆ ಮಣಿಪುರ ಮಾಹಿತಿ ಆಯೋಗ ನಿರ್ದೇಶನ ನೀಡಿದ ಬಳಿಕ, ರಾಜ್ಯ ಗೃಹ ಇಲಾಖೆಯು ಮಣಿಪುರದ ಸಾಹಿತಿ ಹಾಗೂ ರಾಜಕೀಯ ಹೋರಾಟಗಾರ ಹರೇಶ್ವರ್ ಗೋಸ್ವಾಮಿ ಅವರಿಗೆ ಮಾಹಿತಿ ಒದಗಿಸಿದೆ.
ಸ್ಥಳಾಂತರಗೊಂಡ ಸಂತ್ರಸ್ತರು ಒಂಭತ್ತು ಜಿಲ್ಲೆಗಳಲ್ಲಿನ ಪರಿಹಾರ ಶಿಬಿರಗಳು ಹಾಗೂ ತಾತ್ಕಾಲಿಕ ವಸತಿ ಕೇಂದ್ರಗಳಲ್ಲಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಸಂಗ್ರಹಿಸಿರುವ ಅಂಕಿಅಂಶಗಳು ತಿಳಿಸಿವೆ.
ಚೂರಾಚಂದ್ಪುರ ಜಿಲ್ಲೆಯಲ್ಲಿ ಅತ್ಯಧಿಕ 248 ಸಾವುಗಳು ಸಂಭವಿಸಿವೆ. ಬಿಷ್ಣುಪುರದಲ್ಲಿ 151, ಕಾಂಗ್ಪೊಕ್ಪಿಯಲ್ಲಿ 128, ಇಂಫಾಲ ಪಶ್ಚಿಮದಲ್ಲಿ 94, ಕಾಕ್ಚಿಂಗ್ ನಲ್ಲಿ 60, ಇಂಫಾಲ ಪೂರ್ವದಲ್ಲಿ 25, ಜಿರಿಬಾಮ್ ನಲ್ಲಿ 13, ಥೌಬಾಲ್ ನಲ್ಲಿ 11 ಹಾಗೂ ಟೆಂಗ್ನೌಪಾಲ್ ನಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಎರಡು ಪ್ರಕರಣಗಳು ಸೇರಿದಂತೆ ನಾಲ್ಕು ಅಸಹಜ ಸಾವುಗಳು ವರದಿಯಾಗಿವೆ. ಅತಿಯಾದ ಮಾದಕದ್ರವ್ಯ ಸೇವನೆ ಹಾಗೂ ಗುಂಡೇಟಿನ ಗಾಯದಿಂದ ತಲಾ ಒಂದು ಸಾವು ಸಂಭವಿಸಿದೆ.
RTI ಮಾಹಿತಿಯ ಪ್ರಕಾರ, 43 ಸಾವಿರಕ್ಕೂ ಅಧಿಕ ಮಂದಿ ಇನ್ನೂ ನಿರಾಶ್ರಿತರಾಗಿಯೇ ಉಳಿದಿದ್ದಾರೆ.
ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಗರಿಷ್ಠ 15,694 ನಿರಾಶ್ರಿತರು ಆಶ್ರಯ ಪಡೆದಿದ್ದು, ಬಿಷ್ಣುಪುರದಲ್ಲಿ 10,092 ಹಾಗೂ ಚೂರಾಚಂದ್ಪುರದಲ್ಲಿ 6,365 ಮಂದಿ ಇದ್ದಾರೆ.
ನಿರಾಶ್ರಿತರ ಆರೋಗ್ಯ ಸ್ಥಿತಿಯ ಬಗ್ಗೆಯೂ ಅಂಕಿಅಂಶಗಳು ಬೆಳಕು ಚೆಲ್ಲಿವೆ. ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ 217 ಮಂದಿ ದೀರ್ಘಕಾಲೀನ ಅಥವಾ ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇಂಫಾಲ ಪೂರ್ವದಲ್ಲಿ 41 ಹಾಗೂ ಬಿಷ್ಣುಪುರದಲ್ಲಿ 26 ಇಂತಹ ಪ್ರಕರಣಗಳು ವರದಿಯಾಗಿವೆ.

