ಪೆರ್ಲ: ಯಕ್ಷಸ್ನೇಹಿ ಬಳಗ ಪೆರ್ಲ ಮತ್ತು ಶೇಣಿ ರಂಗಜಂಗಮ ಟ್ರಸ್ಟ್ ಕಾಸರಗೋಡು ಇದರ ನೇತೃತ್ವದಲ್ಲಿ ಕುಂಟಾರಿನ ಅಸ್ತಿತ್ವಂ ಪ್ರತಿಷ್ಠಾನದ ಸಹಯೋಗದಲ್ಲಿ ಕಲಾವಿದರುಗಳಿಗಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ಸಲಹಾ ಶಿಬಿರವು ಪೆರ್ಲದ ಸತ್ಯನಾರಾಯಣ ಫ್ರೌಢಶಾಲೆಯಲ್ಲಿ ನ.3 ರಂದು ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 5.30ರ ವರೆಗೆ ಆಯೋಜಿಸಲಾಗಿದೆ.
ಬೆಳಿಗ್ಗೆ 9ಕ್ಕೆ ಖ್ಯಾತ ವೈದ್ಯ ಡಾ.ಶ್ರೀನಿಧಿ ಸರಳಾಯ ಬದಿಯಡ್ಕ ಅವರು ಶಿಬಿರವನ್ನು ಉದ್ಘಾಟಿಸುವರು. ಅರವಿಂದ ಕುಮಾರ್ ಎನ್.ಕೆ.ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಪ್ರಕಾಶ ದೈಲಾಟ ಬೆಂಗಳೂರು ಶುಭಾಶಂಸನೆಗೈಯ್ಯುವರು. ಬಳಿಕ ವಿವಿಧ ರಂಗಗಳ ಕಲಾವಿದರಿಗೆ ತಜ್ಞ ವೈದ್ಯರಿಂದ ವಿವಿಧ ಆರೋಗ್ಯ ತಪಾಸಣೆಗಳು ನಡೆಯಲಿವೆ. ಅಪರಾಹ್ನ 3.30 ರಿಂದ 4.30ರ ವರೆಗೆ ಕಲಾವಿದರಿಗೆ ತಜ್ಞ ವೈದ್ಯರಿಂದ ಆರೋಗ್ಯ ಮಾಹಿತಿ ಕಾರ್ಯಾಗಾರ ನಡೆಯಲಿದೆ. 4.30 ರಿಂದ ನಡೆಯುವ ಸಮಾರೋಪ ಸಮಾರಂಭವನ್ನು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅವರು ಉದ್ಘಾಟಿಸುವರು. ಯಕ್ಷಸ್ನೇಹಿ ಬಳಗದ ಸಂಚಾಲಕ, ಭಾಗವತ ಸತೀಶ ಪುಣಿಚಿತ್ತಾಯ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡುವರು. ಪೆರ್ಲ ಶಾಲಾ ಸಂಚಾಲಕ ಶ್ರೀಕೃಷ್ಣ ವಿಶ್ವಾಮಿತ್ರ ಉಪಸ್ಥಿತರಿರುವರು. ಅಸ್ತಿತ್ವಂ ಪ್ರತಿಷ್ಠಾನದ ಎಸ್.ಎಂ.ಉಡುಪ ಕುಂಟಾರು ಶುಭಾಶಂಸನೆಗೈಯ್ಯುವರು. ಸಮಾರೋಪದ ಬಳಿಕ ಪ್ರಸಿದ್ದ ಕಲಾವಿದರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.
ಶಿಬಿರದಲ್ಲಿ ಜನರಲ್ ಮೆಡಿಸಿನ್, ಶಸ್ತ್ರಿಚಿಕಿತ್ಸಾ ವಿಭಾಗ, ಮಕ್ಕಳ ರೋಗಗಳ ವಿಭಾಗ, ನೇತ್ರ ಚಿಕಿತ್ಸೆ, ಚರ್ಮ ಹಾಗೂ ಲೈಂಗಿಕ ರೋಗ, ಸ್ತ್ರೀ ರೋಗ, ಮೂಳೆ ವಿಭಾಗ, ರಕ್ತಗುಂಪು ವಿಭಾಗ ಹಾಗೂ ದಂತ ಚಿಕಿತ್ಸಾ ವಿಭಾಗದ ತಜ್ಞರು ಭಾಗವಹಿಸುವರು ಎಂದು ಸಂಘಟಕರು ತಿಳಿಸಿದ್ದಾರೆ.


