ಪೆರ್ಲ: ಕವಿತೆ ಹುಟ್ಟಲು ಭಾವ ನಿಷ್ಠತೆ ಬೇಕು. ಪ್ರಕೃತಿಯೆಂದರೆ ಭಾವನಿಷ್ಠತೆಯಾಗಿದ್ದು, ಆದ್ದರಿಂದಲೇ ಕವಿಯಾದವ ಗೋಡೆಯಾಚೆಗೆ ಜಗತ್ತನ್ನು ನೋಡಲು ಹಪಹಪಿಸುತ್ತಾನೆ. ವೈಚಾರಿಕತೆ ಮತ್ತು ಆಧುನಿಕತೆಯ ಪರಸ್ಪರ ಸಮ್ಮಿಲನ ಹೊಸ ಸೃಜನಾತ್ಮಕತೆಯ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಮಂಗಳೂರು ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕ, ಕವಿ ಡಾ.ವಸಂತಕುಮಾರ್ ಪೆರ್ಲ ಅವರು ತಿಳಿಸಿದರು.
ಸಾಹಿತಿ, ಪ್ರಾಧ್ಯಾಪಕ ಬಾಲಕೃಷ್ಣ ಬೇರಿಕೆ ಅವರ ನಾಲ್ಕನೆಯ ಸಾಹಿತ್ಯ ಸಂಕಲನವಾದ ಹೆಸರಿರದ ಹೂವು ಹನಿಗವನ ಸಂಕಲನವನ್ನು ಭಾನುವಾರ ಆರ್ಲಪದವಿನ ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾ ಭವನದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಾವ್ಯ ಎಂದಿಗೂ ವೈಯುಕ್ತಿಕತೆಯನ್ನು ಮೀರಿ ಸಾರ್ವತ್ರಿಕತೆಯತ್ತ ತೆರೆದುಕೊಂಡಾಗ ಗೆಲ್ಲಬಹುದು. ಕಾವ್ಯ-ಕವಿತೆಗಳು ವರ್ಣನೆ, ಭಾವನಾತ್ಮಕತೆಯ ಮೂಲಕ ವೈಚಾರಿಕತೆಗೆ ಹೊರಳಿ ಅರಳಲ್ಪಡುತ್ತದೆ ಎಂದು ಅವರು ತಿಳಿಸಿದರು. ಸದಾ ಧನಾತ್ಮಕ ಚಿಂತನಶೀಲನಾದ ಕವಿ, ಭಾವ-ತರಂಗಗಳನ್ನು ಓದುಗನಲ್ಲಿ ಸೃಷ್ಟಿಸಿ ಕ್ರಿಯಾತ್ಮಕ ಸಮಾಜ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸುತ್ತಾನೆ. ಕಾವ್ಯ ಸೃಷ್ಟಿಯ ಸಂದರ್ಭ ಕವಿಯಲ್ಲಿ ಡಾಂಭಿಕತನ, ಸುಳ್ಳುಗಳಂತಹ ಋಣಾತ್ಮಕತೆ ಲವಲೇಶವೂ ಇರಲಾರದು ಎಂದ ಅವರು ಹೆಸರಿರದ ಹೂವು ಕಾಡ ಮಲ್ಲಿಗೆಯನ್ನು ನೆನಪಿಸುತ್ತದೆ. ಹೂವನ್ನು ನೋಡಿ ಆಸ್ವಾದಿಸಿ, ಗಂಧ ಆಘ್ರಾಣಿಸಿ ಸವಿಯುತ್ತೇವೆ. ಸಾಹಿತ್ಯವೂ ಅನುಭವಿಸಿ ಲೌಕಿಕತೆಯೊಂದಿಗೆ ಅಲೌಕಿಕ, ಪಾರಮಾರ್ಥ ಸಹಿತ ಹೊಸತನವನ್ನು ಅನುಭವಿಸಲು ಸಾಧ್ಯವಾಗಿಸುತ್ತದೆ ಎಂದು ತಿಳಿಸಿದರು.
ಮಧುರೈ ಕಾಮಕಾಜ ವಿವಿಯ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ಹರಿಕೃಷ್ಣ ಭರಣ್ಯ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಮತಾ ಸಾಹಿತ್ಯ ವೇದಿಕೆಯನ್ನು ಪಾಣಾಜೆ ಸುಬೋಧ ಫ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಪಿಲಿಂಗಲ್ಲು ಕೃಷ್ಣ ಭಟ್ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ ಜನರಲ್ಲಿ ಸಮಗ್ರ ಜಾಗೃತಿ, ಸಮಾಜದ ಕ್ರಿಯಾತ್ಮಕತೆಯ ಉಳಿಯುವಿಕೆಗೆ ಸಾಹಿತ್ಯ ಚಟುವಟಿಕೆಗಳನ್ನು ಬೆಂಬಲಿಸುವ, ಸಂಘಟಿಸುವ ಸಂಸ್ಥೆಗಳು ಮಹತ್ವದ ಸೇವೆ ಸಲ್ಲಿಸುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್ ಕೃತಿ ಪರಿಚಯ ನೀಡಿ ಮಾತನಾಡಿದರು. ಕೃತಿ ಕರ್ತೃ ಬಾಲಕೃಷ್ಣ ಬೇರಿಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಸರಗೋಡು ಸರ್ಕಾರಿ ಕಾಲೇಜಿನ ಸಂಶೋಧನಾ ವಿದ್ಯಾರ್ಥಿ, ಸಮತಾ ಸಾಹಿತ್ಯ ವೇದಿಕೆಯ ರವಿಶಂಕರ ಭರಣ್ಯ ಸ್ವಾಗತಿಸಿ, ನಿರೂಪಿಸಿದರು. ಬಳಿಕ ಕವಿ ರಾಧಾಕೃಷ್ಣ ಉಳಿಯತ್ತಡ್ಕರ ಅಧ್ಯಕ್ಷತೆಯಲ್ಲಿ ಹನಿ ಕವಿತೆಗಳ ಗೋಷ್ಠಿ ನಡೆಯಿತು.


