ಕಾಸರಗೋಡು: ಕಾಸರಗೋಡು ಜಿಲ್ಲೆಯ ಕಲಾವಿದರು ಈ ವರೆಗೆ ಪಡೆಯದ ವಿಶಿಷ್ಟ ಅನುಭವವನ್ನು ನಗರದಲ್ಲಿ ಎರಡು ದಿನಗಳ ಕಾಲ ನಡೆದ ಅಭಿನಯ ಶಿಬಿರ ಒದಗಿಸಿದೆ.
ಸಿನಿಮಾ ಮತ್ತು ನಾಟಕಕ್ಕೆ ಸಂಬಂಧಿಸಿದ ಅಭಿನಯ ಕುರಿತು ಪ್ರಾತ್ಯಕ್ಷಿಕೆ ಸಹಿತ ನಡೆದ ಶಿಬಿರ ವಯೋಮಾನದ ವ್ಯತ್ಯಾಸವಿಲ್ಲದೆ ಕಲಾಪ್ರೇಮಿಗಳ ಮನಸೂರೆಗೊಳಿಸಿದೆ.
ರಂಗಸಂಸ್ಥೆ ಪಾರೆಕಟ್ಟೆಯ ರಂಗಕುಟೀರ ಸಂಸ್ಥೆಯ ಆಶ್ರಯದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಿಂದ ಈ ಉಭಯದಿನಗಳ ಶಿಬಿರ ಕೋಟೆಕಣಿಯ ಸವಾಕ್ ಸಭಾಂಗಣದಲ್ಲಿ ಜರುಗಿತ್ತು. ಹಿರಿಯ ನಿರ್ದೇಶಕ ಬಾಸುಮ ಕೊಡಗು ಶಿಬಿರದ ನಿರ್ದೇಶಕರಾಗಿದ್ದರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಸಂಚಾಲಕತ್ವವವನ್ನು ವಹಿಸಿದ್ದರು.
ಅಭಿನಯ, ಸಂಭಾಷಣೆ, ಹಾವಭಾವ ಸಹಿತ ಬೇರೆ ಬೇರೆ ವಿಭಾಗಗಳಲ್ಲಿ ತರಬೇತಿ ಜರುಗಿತ್ತು. ಪ್ರತಿಗೋಷ್ಠಿಯಲ್ಲಿ ಕೆಮರಾ ಮೂಲಕ ಶಿಬಿರಾರ್ಥಿಗಳ ಪ್ರಸ್ತುತಿಯನ್ನು ಚಿತ್ರೀಕರಿಸಿ ಲೋಪದೋಷಗಳನ್ನು ಸರಿಪಡಿಸಲಾಗಿತ್ತು. ಮಕ್ಕಳು, ಮಹಿಳೆಯರು, ಪುರುಷರು ಸೇರಿದಂತೆ 50 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಶಿಬಿರದ ಯಶಸ್ಸಿನ ಪರಿಣಾಮ ಕಾಸರಗೋಡಿನಲ್ಲಿ ಜನಜಾಗೃತಿ ಮೂಡಿಸುವ ಎರಡು ಕಿರುಚಿತ್ರಗಳನ್ನು ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಯಿತು. ಬಾಸುಮ ಕೊಡಗು ಅವರ ನಿರ್ದೇಶನದಲ್ಲಿ ಕಾಸರಗೋಡು ಜಿಲ್ಲೆಯ ಪ್ರತಿಭಾನ್ವಿತ ಕಲಾವಿದರು ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶಿಬಿರದಲ್ಲೇ ಕಲಾವಿದೆ ಅಶ್ವಿತಾ ಬಿ.ಜಿ. ಅವರು ರಚಿಸಿದ ಹಾಡಿಗೆ ಬಾಲಕಲಾವಿದ ದೃಶ್ಯ ಕೊಡಗು ಸಂಗೀತ ನಿರ್ದೇಶನ ಮಾಡಿದರು. ಬಾಲಕಲಾವಿದ ಆದಿತ್ಯ ಎಸ್. ಹಾಡಿದರು. ಛಾಯಾಗ್ರಹಣದಲ್ಲಿ ಸುರೇಂದ್ರ ಪಣಿಯೂರು ಸಹಕರಿಸಿದರು. ಶಿಬಿರದ ಚಟುವಟಿಕೆಗಳಿಗೆ ಕಲಾವಿದ ವೀಜಿ ಕಾಸರಗೋಡು, ದಯಾ ಪಿಲಿಕುಂಜೆ, ದಿವಾಕರ ಅಶೋಕನಗರ, ಜಯಂತಿ ಸುವರ್ಣ, ಭಾರತೀಬಾಬು, ಜಾಹ್ನವಿ ಟೀಚರ್, ಚೈತ್ರಾ ಆರ್. ಮೊದಲಾದವರು ಸಹಕಾರ ನೀಡಿದರು.


