ತಿರುವನಂತಪುರ: ರಾಜ್ಯದಲ್ಲಿ ಪ್ರತಿದಿನ ಏರುಗತಿಯಲ್ಲಿ ಸಾಗುತ್ತಿರುವ ಕೊರೊನಾ ಸೋಂಕು ಹಾಗೂ ಸಂಪರ್ಕದ ಕಾರಣ ಸೋಂಕು ಹೆಚ್ಚಳವಾಗುತ್ತಿರುವುದನ್ನೂ ಮನಗಂಡು ರಾಜ್ಯಾದ್ಯಂತ ಮತ್ತೆ ಲಾಕ್ ಡೌನ್ ಹೇರಬೇಕೇ ಎಂಬ ಬಗ್ಗೆ ಗುರುವಾರ ತಿರುವನಂತಪುರದಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಶೀಘ್ರದಲ್ಲೇ ಸಂಪೂರ್ಣ ಲಾಕ್ ಡೌನ್ ಹೇರದಿರಲು ಸಂಪುಟ ಸಭೆ ನಿರ್ಧರಿಸಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಘೋಷಿಸಬೇಕಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತವಾದ ಸಭೆಯಲ್ಲಿ ಸೋಮವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಜು. 27 ರಂದು ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಸಂಪೂರ್ಣ ಲಾಕ್ಡೌನ್ ಸೇರಿದಂತೆ ಸಮಸ್ಯೆಗಳನ್ನು ಚರ್ಚಿಸಲಾಗುವುದು. ಸಾಮಾಜಿಕ-ಆರ್ಥಿಕ ಅಂಶಗಳನ್ನು ಪರಿಗಣಿಸಿದ ನಂತರ ಲಾಕ್ ಡೌನ್ ಘೋಷಿಸುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಚಿವರುಗಳು ಹೇಳಿದರು. ಪ್ರತಿಪಕ್ಷಗಳ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡ ನಂತರ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿದುಬಂದಿದೆ.
ಗುರುವಾರ ಸೇರಿದ್ದ ಕ್ಯಾಬಿನೆಟ್ ಮಂತ್ರಿಗಳಲ್ಲಿ ಹೆಚ್ಚಿನವರು ರಾಜ್ಯವನ್ನು ಸಂಪೂರ್ಣ ಲಾಕ್ ಡೌನ್ ಘೋಷಿಸುವ ಸ್ಥಿತಿಯಲ್ಲಿಲ್ಲ ಎಂದು ಹೇಳಿರುವರೆಂದು ತಿಳಿದುಬಂದಿದೆ. ಪ್ರಸ್ತುತ ಪರಿಸ್ಥಿತಿಯನ್ನು ಎದುರಿಸಲು ರಾಜ್ಯವು ಪ್ರಾಥಮಿಕ ಸೌಲಭ್ಯಗಳನ್ನು ಹೊಂದಿದೆ. ಸಂಪೂರ್ಣ ಲಾಕ್ ಡೌನ್ ಘೋಷಿಸುವಾಗ ಉಂಟಾಗುವ ಪ್ರಾಯೋಗಿಕ ವಿಷಯಗಳ ಬಗ್ಗೆ ವಿವರವಾಗಿ ಚರ್ಚಿಸಬೇಕಾಗಿದೆ ಎಂದು ಕ್ಯಾಬಿನೆಟ್ ಸದಸ್ಯರು ಹೇಳಿದರು.
ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಜು. 27 ರಂದು ನಿಗದಿಯಾಗಿದ್ದ ವಿಧಾನಸಭೆ ಅಧಿವೇಶನವನ್ನು ಮುಂದೂಡಲು ನಿರ್ಧರಿಸಲಾಗಿದೆ. ಆದರೆ ಸೋಮವಾರವೇ(ಜು27) ವಿಶೇಷ ಕ್ಯಾಬಿನೆಟ್ ಸಭೆ ನಡೆಯಲಿದೆ. ಇಂದು(ಶುಕ್ರವಾರ) ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಕೋವಿಡ್ ರಕ್ಷಣಾ ಚಟುವಟಿಕೆಗಳ ಬಗ್ಗೆ ಸಚಿವರು ಚರ್ಚಿಸಲಿದ್ದಾರೆ. ಲಾಕ್ ಡೌನ್ ಸೇರಿದಂತೆ ವಿಷಯಗಳ ಬಗ್ಗೆಯೂ ಚರ್ಚಿಸಲಾಗುವುದು ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ವಿಧಿಸುವ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ ಹೇಳಿದ್ದರು. ತಜ್ಞರು ಲಾಕ್ ಡೌನ್ ಮಾಡಲು ಒತ್ತಾಯಿಸುತ್ತಿದ್ದಾರೆ. ಎಲ್ಲವನ್ನೂ ಪರಿಶೀಲಿಸಿದ ನಂತರ ಲಾಕ್ಡೌನ್ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಯಾವುದೇ ಗಂಭೀರ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸಿದ್ಧವಿದೆ ಎಂದು ಮುಖ್ಯಮಂತ್ರಿ ತಿಳಿಸಿರುವರು.
ಕೇರಳದಲ್ಲಿ ಸಂಪೂರ್ಣ ಲಾಕ್ಡೌನ್ ಪರಿಣಾಮಕಾರಿಯಲ್ಲ-ಐಎಂಎ
ಕೇರಳದಲ್ಲಿ ಸಂಪೂರ್ಣ ಲಾಕ್ಡೌನ್ ಪರಿಣಾಮಕಾರಿಯಾಗದು ಎಂದು ಐಎಂಎ ರಾಜ್ಯ ಅಧ್ಯಕ್ಷ ಡಾ. ಅಬ್ರಹಾಂ ವರ್ಗೀಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಸ್ಥಳೀಯವಾದ ಲಾಕ್ ಡೌನ್ಗಳಷ್ಟೇ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಕೇರಳದಲ್ಲಿ ಈ ಹಿಂದೆ ಸಂಪೂರ್ಣ ಲಾಕ್ ಡೌನ್ ಹೇರಿದ್ದ ವೇಳೆ ಕೋವಿಡ್ ತಡೆಗಟ್ಟುವ ಚಟುವಟಿಕೆಗಳನ್ನು ತೀವ್ರಗೊಳಿಸಲು ಸಾಧ್ಯವಾಗಿದೆ. ಮತ್ತು ಕೋವಿಡ್ ಹರಡುವಿಕೆಯನ್ನು ನಿಯಂತ್ರಣಕ್ಕೆ ತರಲಾಗಿದೆ. ಆದಾರೂ ಪ್ರಸ್ತುತ ಸಂದರ್ಭದಲ್ಲಿ ಸ್ಥಳೀಯ ಲಾಕ್ ಡೌನ್ಗಳು ಪೂರ್ಣ ಲಾಕ್ಡೌನ್ಗಳಿಗಿಂತ ಹೆಚ್ಚು ಪರಿಣಾಮಕಾರಿ. ಕೋವಿಡ್ ಕಾಯಿಲೆ ಹರಡಿದ ಕ್ಲಸ್ಟರ್ಗಳನ್ನು ಒಳಗೊಂಡಿರುವ ಪ್ರದೇಶಗಳಲ್ಲಿ ಮತ್ತೆ ಲಾಕ್ಡೌನ್ಗಳನ್ನು ಜಾರಿಗೆ ತರಲು ಐಎಂಎ ಸೂಚಿಸಿದೆ.
ಕೇರಳದಲ್ಲಿ ಕೋವಿಡ್ ಸಾಮುದಾಯಿಕ ಹರಡುವಿಕೆಯ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ತಿರುವನಂತಪುರ, ಕೊಚ್ಚಿ ಮತ್ತು ಕೋಝಿಕ್ಕೋಡ್ ಜಿಲ್ಲೆಗಳೂ ಸೇರಿದಂತೆ ಎಲ್ಲಾ ಪ್ರದೇಶಗಳಲ್ಲಿ ಈ ಲಕ್ಷಣಗಳು ಕಂಡುಬರುತ್ತಿವೆ. ಸೋಂಕು ಹಬ್ಬಲು ಕಾರಣವಾಗುವ ಮೂಲವನ್ನು ಪತ್ತೆಹಚ್ಚಲಾಗದ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಐಎಂಎ ಪುನರುಚ್ಚರಿಸುತ್ತದೆ ಮತ್ತು ಸಾಮುದಾಯಿಕವಾಗಿ ಏಕಾಏಕಿ ಲಕ್ಷಣರಹಿತ ಕೋವಿಡ್ ಧನಾತ್ಮಕ ಪ್ರಕರಣಗಳಂತಹ ಅಂಶಗಳಿಗೆ ಕಾರಣವಾಗಿದೆ ಎಂದು ಐಎಂಎ ಬೊಟ್ಟುಮಾಡಿದೆ.
ಪ್ರಸ್ತುತ ರಾಜ್ಯದಲ್ಲಿ ಯಾರೂ ಸೋಂಕು ವಾಹಕವಾಗಬಹುದು. ಗಂಟಲ ದ್ರವ ಪರೀಕ್ಷೆಯ ಮೂಲಕ ಹೊರತುಪಡಿಸಿ ಒಬ್ಬ ವ್ಯಕ್ತಿಯು ವೈರಸ್ನ ವಾಹಕವಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಮತ್ತು ನೈರ್ಮಲ್ಯವನ್ನು ಕಾಪಾಡುವುದು ತುರ್ತು ಅಗತ್ಯ. ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಮಾತ್ರ ರೋಗ ನಿರೋಧಕ ಶಕ್ತಿಯ ವೃದ್ದಿ ಸಾಧ್ಯ ಎಂದು ಅವರು ಹೇಳಿರುವರು.


