ಬೊಕಾರೊ : ಇತರ ಧರ್ಮಗಳಿಗೆ ಮತಾಂತರಗೊಳ್ಳುವ ಆದಿವಾಸಿಗಳನ್ನು ಮೀಸಲಾತಿ ಸೌಲಭ್ಯದಿಂದ ಕೈಬಿಡಬೇಕೆಂದು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಒತ್ತಾಯಿಸಿದ್ದಾರೆ.
ಸಮುದಾಯದ ಹೊರಗೆ ಮದುವೆಯಾಗುವ ಆದಿವಾಸಿ ಮಹಿಳೆಯರನ್ನೂ ಮೀಸಲಾತಿ ಸೌಲಭ್ಯದಿಂದ ಕೈಬಿಡಬೇಕೆಂದು ಅವರು ಹೇಳಿದ್ದಾರೆ.
ಬೊಕಾರೊ ಜಿಲ್ಲೆಯ ಬಲಿದಿಹ್ ಜಹೇರ್ಗಢದಲ್ಲಿ ಆಯೋಜಿಸಲಾಗಿದ್ದ 'ಸರ್ಹುಲ್/ಬಹಾ' ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸೊರೆನ್, ಇತರ ಧರ್ಮಗಳಿಗೆ ಮತಾಂತರಗೊಳ್ಳುವ ಆದಿವಾಸಿಗಳಿಗೆ ಅಥವಾ ಸಮುದಾಯದ ಹೊರಗೆ ಮದುವೆಯಾಗುವ ಆದಿವಾಸಿ ಮಹಿಳೆಯರಿಗೆ ಮೀಸಲಾತಿ ಸೌಲಭ್ಯಗಳನ್ನು ನೀಡುವುದನ್ನು ಬಲವಾಗಿ ವಿರೋಧಿಸಿದರು.
ಅಂತಹವರನ್ನು ಮೀಸಲಾತಿ ಪಟ್ಟಿಯಿಂದ ಕೈಬಿಡದಿದ್ದರೆ ಆದಿವಾಸಿಗಳ ಅಸ್ತಿತ್ವವೇ ನಾಶವಾಗುತ್ತದೆ ಎಂದು 'ಜಹೇರ್ಗಢ' (ಬುಡಕಟ್ಟು ಜನರ ಪೂಜಾ ಸ್ಥಳ)ದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸೊರೆನ್ ಹೇಳಿದ್ದಾರೆ. ಆದಿವಾಸಿ ಸಮುದಾಯವು ಎಚ್ಚರಗೊಳ್ಳಬೇಕೆಂದು ಕರೆ ನೀಡಿದ್ದಾರೆ.
ನಾವು ಈಗ ನಿದ್ರೆಯಿಂದ ಎಚ್ಚರಗೊಳ್ಳದಿದ್ದರೆ, ಸಮುದಾಯಕ್ಕೆ ಉಳಿವೇ ಇರುವುದಿಲ್ಲ ಎಂದು ಸೊರೆನ್, ಜಹರ್ಸ್ಥಾನ, ಸರ್ನಾ ಮತ್ತು ದೇಶಾವಲಿಗಳಲ್ಲಿ (ಎಲ್ಲವೂ ಆದಿವಾಸಿಗಳ ಪವಿತ್ರ ಪೂಜಾ ಸ್ಥಳಗಳು) ಪ್ರಾರ್ಥನೆ ಸಲ್ಲಿಸಿದ ಬಳಿಕ ಹೇಳಿದ್ದಾರೆ.




