ಕಾಸರಗೋಡು: ನಗರದ ಕರಂದಕ್ಕಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಟೋರಸ್ ಲಾರಿ ಹಿಂಭಾಗಕ್ಕೆ ಇನ್ನೊಂದು ಲಾರಿ ಡಿಕ್ಕಿಯಾದ ಪರಿಣಾಮ ಕ್ಯಾಬಿನ್ ಒಳಗಡೆ ಸಿಲುಕಿಕೊಂಡ ಚಾಲಕ ಹಾಗೂ ಸಹ ಚಾಲಕನನ್ನು ಅಗ್ನಿಶಾಮಕ ದಳ ಸಿಬ್ಬಂದಿ ಸಾಹಸಕರ ರೀತಿಯಲ್ಲಿ ಹೊರ ತೆಗೆದು ರಕ್ಷಿಸಿದ್ದಾರೆ.
ಸೋಮವಾರ ತಡರಾತ್ರಿ ಅಪಘಾತ ಸಂಭವಿಸಿದೆ. ಕಾಸರಗೋಡಿಗೆ ಇಲೆಕ್ಟ್ರಿಕ್ ಕೇಬಲ್ ತರುತ್ತಿದ್ದ ಲಾರಿ, ಟೋರಸ್ ಲಾರಿ ಹಿಂಭಾಗಕ್ಕೆ ಡಿಕ್ಕಿಯಾಗಿದೆ. ಲಾರಿ ಎದುರು ಭಾಗ ನಜ್ಜುಗುಜ್ಜಗಿದ್ದು, ಮಾಹಿತಿ ಪಡೆದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಕ್ರೇನ್ ಬಳಸಿ ತಾಸುಗಳ ಕಾಲ ನಡೆಸಿದ ಕಾರ್ಯಾಚರಣೆಯಿಂದ ಚಾಲಕ ಬಿಸ್ವಜಿತ್ ಮಂಡಲ್ ಹಾಗೂ ಸಹಚಾಲಕ ಸ್ವರೂಪ್ ಎಂಬವರನ್ನು ಹೊರತೆಗೆದು, ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

