ಮುಳ್ಳೇರಿಯ: 2023ರಿಂದ ಜಾರಿಗೆ ತಂದ ಕ್ಷಯಮುಕ್ತ ಚಟುವಟಿಕೆಗಳಿಗಾಗಿ ಬೆಳ್ಳೂರು ಗ್ರಾಮ ಪಂಚಾಯತಿಗೆ ಚಿನ್ನದ ಪದಕ ಲಭಿಸಿದೆ. ವಿಶ್ವ ಕ್ಷಯರೋಗ ದಿನವಾದ ಮಂಗಳವಾರ ಜಿಲ್ಲಾಧಿಕಾರಿ ಈ ಪ್ರಶಸ್ತಿ ಪ್ರದಾನ ಮಾಡಿದರು.
2023 ರಲ್ಲಿ ಬೆಳ್ಳೂರಿನಲ್ಲಿ ಸೂರ್ಯೋದಯ ಎಂಬ ಹೆಸರಲ್ಲಿ ಕ್ಷಯಮುಕ್ತ ಭಾರತ್ ಯೋಜನೆ ಆರಂಭಿಸಲಾಗಿತ್ತು. ಇದರಂಗವಾಗಿ ಆರೋಗ್ಯ ಪಡೆಯನ್ನು ರಚಿಸಿ ತರಬೇತಿ ನೀಡಲಾಗಿತ್ತು. ಇವರು ಹಾಗೂ ಆರೋಗ್ಯ ಕಾರ್ಯಕರ್ತರು ಪಂಚಾಯತಿ ವ್ಯಾಪ್ತಿಯ ಮನೆಗಳಿಗೆ ತೆರಳಿ ರೋಗ ತಪಾಸಣೆಗಾಗಿ ಸಹಕರಿಸಿದ್ದರು. ಜಿಲ್ಲೆಯಲ್ಲಿ ಕ್ಷಯಮುಕ್ತ ಚಟುವಟಿಕೆಗಳನ್ನು ಆರಂಭಿಸಿದ ಪಂಚಾಯತಿಗಳಲ್ಲಿ ಪ್ರಥಮ ಪಂಚಾಯತಿ ಬೆಳ್ಳೂರಾಗಿದೆ. ಇದರ ಆಧಾರದಲ್ಲಿ ಬೆಳ್ಳೂರು ಪಂಚಾಯತಿಗೆ 2023 ರಲ್ಲಿ ಕಂಚಿನ ಪದಕ, 2024 ರಲ್ಲಿ ಬೆಳ್ಳಿ ಪದಕ ಲಭಿಸಿದೆ. ಈ ಬಾರಿ ಚಿನ್ನದ ಪದಕದ ಮನ್ನಣೆ ಪಂಚಾಯತಿಗೆ ಲಭಿಸಿ ಹೆಮ್ಮೆ ತಂದಿದೆ.
ಯೋಜನೆಯಂಗವಾಗಿ ರೋಗಿಗಳಿಗೆ ಪೋಷಕಾಂಶಗಳ ಕಿಟ್ ವಿತರಣೆ, ರೋಗಿಗಳು, ಕುಟುಂಬ ಸದಸ್ಯರಿಗೆ ಉಚಿತ ತಪಾಸಣೆ ಸೌಲಭ್ಯ, ಔಷಧಿ ಒದಗಿಸಲಾಗಿದೆ. ಈ ಯೋಜನೆ ಕ್ಷಯ ಸಂಪೂರ್ಣ ಮುಕ್ತವಾಗುವವರೆಗೆ ಮುಂದುವರಿಯಲಿದೆಯೆಂದು ಬೆಳ್ಳೂರು ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ತಿಳಿಸಿದ್ದಾರೆ.

