ಪೆರ್ಲ: 'ಅಮ್ಮ ಓದು' ಒಂದು ವಿಶಿಷ್ಟ ಯೋಜನೆಯಾಗಿದ್ದು, ವಿದ್ಯಾರ್ಥಿಗಳನ್ನು ಓದಿನೆಡೆಗೆ ಪ್ರೇರೇಪಿಸುವುದರ ಜತೆಗೆ ವಿದ್ಯಾರ್ಥಿಗಳ ಹೆತ್ತವರಲ್ಲೂ ಜ್ಞಾನದ ಭಂಡಾರ ಹೆಚ್ಚಿಸಲು ಸಹಕಾರಿ ಎಂಬುದಾಗಿ ನಿವೃತ್ತ ಶಿಕ್ಷಕ ಬಟ್ಯ ಮಾಸ್ಟರ್ ತಿಳಿಸಿದ್ದಾರೆ.
ಅವರು ಎಣ್ಮಕಜೆ ಪಂಚಾಯಿತಿ ಬಾಳೆಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ 2025-26ನೇ ಸಾಲಿನ 'ಅಮ್ಮ ಓದು'ಕಾರ್ಯಕ್ರಮದ ಸಮಾರೋಪ, ನಾಲ್ಕನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಹೆತ್ತವರಿಗೆ ಪುಸ್ತಕ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಓದುವಿಕೆಯಿಂದ ಮಕ್ಕಳು ದೂರಾಗುತ್ತಿರುವ ಕಾಲಘಟ್ಟದಲ್ಲಿ, ಶಾಲೆಯಲ್ಲಿ ಆರಂಭಿಸಿರುವ ಅಮ್ಮ ಓದು ಕಾರ್ಯಕ್ರಮ ಪುಸ್ತಕ ಸಂಸ್ಕøತಿ ಬೆಳೆಯಲು ಪ್ರೇರಣೆ ನೀಡಲಿದೆ. ಹೆತ್ತವರು ಮೊಬೈಲ್ ಬಿಟ್ಟು ಓದಿನ ಕಡೆ ಗಮನಹರಿಸಿದಾಗ ಮಕ್ಕಳು ತಾವಾಗಿ ಓದಿನ ಕಡೆ ಗಮನ ಹರಿಸಲು ಸಾಧ್ಯವಾಗುವುದಾಗಿ ತಿಳಿಸಿದರು.
ಪತ್ರಕರ್ತ ಪುರುಷೋತ್ತಮ ಬಿ.ಎಂ ಸಮಾರಂಭ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಬಾಳೆಮೂಲೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೊಬೈಲ್ ಓದಿಗಿಂತ ಪುಸ್ತಕಗಳ ಓದು ಮಸ್ತಕಕ್ಕೆ ಹೆಚ್ಚಿನ ಜ್ಞಾನ ತಂದುಕೊಡಲು ಸಾಧ್ಯ. ಮಕ್ಕಳಲ್ಲಿ ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳುವ ಬಗ್ಗೆ ಹೆತ್ತವರು ಗಮನಹರಿಸಬೇಕು ಎಂದು ತಿಳಿಸಿದರು.
ಎಸ್ಎಂಸಿ ಅಧ್ಯಕ್ಷ ನಾರಾಯಣ ಪರಗುಡ್ಡೆ, ಉಪಾಧ್ಯಕ್ಷ ಪುರಂದರ, ಪಿಟಿಎ ಉಪಾಧ್ಯಕ್ಷ ಚನಿಯಪ್ಪ ನಾಯ್ಕ್, ಮಹಾಲಿಂಗ ನಾಯ್ಕ್ ಬಾಳೆಮೂಲೆ, ಮಾತೃ ಪಿಟಿಎ ಅಧ್ಯಕ್ಷೆ ಪದ್ಮಾವತಿ, ಶಾಲಾ ಶಿಕ್ಷಕ ವೃಂದ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ರಾಜೇಶ್ ಬಜಕೂಡ್ಲು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿಯರಾದ ಸಹನಾ ಕಾರ್ಯಕ್ರಮ ನಿರೂಪಿಸಿದರು. ಜಯಪ್ರಭಾ ವಂದಿಸಿದರು. ಈ ಸಂದರ್ಭ ಶಾಲೆ ವತಿಯಿಂದ ಹೆತ್ತವರಿಗೆ ಪುಸ್ತಕ ವಿತರಿಸಲಾಯಿತು.



