ಪೆರ್ಲ: ಕುರಡ್ಕದ ಶ್ರೀ ದುರ್ಗಾ ಆಟ್ರ್ಸ್ ಅಂಡ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಸನ್ಮಾನ, ಎಲ್ಲೆಸ್ಸೆಸ್, ಎಸ್ಸೆಸೆಲ್ಸಿ ಹಾಗೂ ಪ್ಲಸ್ ಟು ವಿಭಾಗಗಳಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವು ಬಜಕೂಡ್ಲು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಸಭಾಂಗಣದಲ್ಲಿ ಜರಗಿತು.
ಜಿ ಹೆಚ್ ಎಸ್ ಎಸ್ ಪೈವಳಿಕೆಯ ಜಯಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಾಧನೆಗೆ ವಯಸ್ಸು ಎಂದಿಗೂ ಅಡ್ಡಿಯಾಗದು. ಕಠಿಣ ಪರಿಶ್ರಮ ನಮ್ಮ ಬದುಕನ್ನು ರೂಪಿಸುವ ಮಾನದಂಡವಾಗಿರುವುದಾಗಿ ತಿಳಿಸಿದರು.
ಸಂಘಟನೆಯ ಅಧ್ಯಕ್ಷ, ಶಿಕ್ಷಕ ಗಣೇಶ್ ಕುಮಾರ್ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯೆ ಸೌಧಾಬಿಹನೀಫ್ ನಡುಬೈಲ್ ಅತಿಥಿಯಾಗಿ ಭಾಗವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಜನಾರ್ದನ ಮಾಸ್ಟರ್ ಉಪಸ್ಥಿತರಿದ್ದರು. ಈ ಸಂದರ್ಭ 'ಸೆಕೆಂಡ್ ಡಾನ್ ಬ್ಲ್ಯಾಕ್ ಬೆಲ್ಟ್' ಪದವಿ ಪಡೆದ ಕಾಸರಗೋಡಿನ ಕರಾಟೆ ಪಟು ಸೌಮ್ಯ ಚೆಂಬ್ರಕಾನ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಶ್ರೀ ದುರ್ಗಾಪರಮೇಶ್ವರಿ ಮಂದಿರದ ಪ್ರಧಾನ ಅರ್ಚಕ ಐತ್ತು ನಾಯ್ಕ ಬಜಕೂಡ್ಲು ಸಮಾರಂಭ ಉದ್ಘಾಟಿಸಿದರು. ಪಡ್ರೆ ಸರ್ಕಾರಿ ಪ್ರೌಶಾಲೆ ಶಿಕ್ಷಕಿ ಉಷಾ ಕುಮಾರಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಹರ್ಷಿತ, ಸೌಮ್ಯ, ಮೇಘಶ್ರೀ ಹಾಗೂ ಪ್ರಸೀದಾ ಪ್ರಾರ್ಥನೆ ಹಾಡಿದರು. ರಮೇಶ್ ಕುರಡ್ಕ ಸ್ವಾಗತಿಸಿ, ವಂದಿಸಿದರು.



