ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿರುವ ಭಾರತ, ತನ್ನ ರಾಜಕೀಯ ಅಜೆಂಡಾಗಳಿಗಾಗಿ ಪಾಕಿಸ್ತಾನವು ವಿಶ್ವಸಂಸ್ಥೆಯ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದೆ. ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿತ್ತು, ಅಂಗವಾಗಿದೆ, ಅಂಗವಾಗಿರುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ.
ಭದ್ರತಾ ಮಂಡಳಿಯ ವಾರ್ಷಿಕ ವರದಿಯ ಕುರಿತಾದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್, ಪಾಕಿಸ್ತಾನ ಮತ್ತೊಮ್ಮೆ ಭಾರತದ ಆಂತರಿಕ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಸ್ತಾಪ ಇಟ್ಟಿದೆ ಎಂದು ಹೇಳಿದ್ದಾರೆ.
'ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರವು ಭಾರತದ ಆಂತರಿಕ ವಿಷಯವಾಗಿದ್ದು, ಆ ಬಗ್ಗೆ ಪಾಕಿಸ್ತಾನದ ಅನಗತ್ಯ ಉಲ್ಲೇಖವು ನನ್ನನ್ನು ಪ್ರತಿಕ್ರಿಯಿಸುವಂತೆ ಮಾಡಿದೆ' ಎಂದು ರಾಯಭಾರಿ ಹೇಳಿದ್ದಾರೆ.
ತಪ್ಪು ಮಾಹಿತಿ ನೀಡುವುದು ಮತ್ತು ದಾರಿತಪ್ಪಿಸುವ ಹೇಳಿಕೆ ನೀಡುವ ಮೂಲಕ ಪಾಕಿಸ್ತಾನವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯನಾಗಿ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ. ತಮ್ಮ ವಿಭಜಿತ ರಾಜಕೀಯ ಹಿತಾಸಕ್ತಿಗಳಿಗಾಗಿ ವಿಶ್ವಸಂಸ್ಥೆಯ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳಲು ಪಾಕಿಸ್ತಾನ ನಿರ್ಧರಿಸಿದೆ. ಭದ್ರತಾ ಮಂಡಳಿಯ ಸದಸ್ಯರಾಗಿರುವುದು ಒಂದು ದೊಡ್ಡ ಜವಾಬ್ದಾರಿ ಎಂದು ನಾನು ಪಾಕಿಸ್ತಾನಕ್ಕೆ ನೆನಪಿಸಲು ಬಯಸುತ್ತೇನೆ. ಇದು ಪಕ್ಷಪಾತದ ಮತ್ತು ಸುಳ್ಳು ನಿರೂಪಣೆಗಳನ್ನು ಹರಡುವ ವೇದಿಕೆಯಲ್ಲ ಎಂದು ರಾಯಭಾರಿ ಹೇಳಿದ್ದಾರೆ.
ಕಾಶ್ಮೀರದ ಬಗ್ಗೆ ಭಾರತದ ನಿಲುವನ್ನು ಸ್ಪಷ್ಟಪಡಿಸಿದ ಅವರು, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಅಂಗವಾಗಿತ್ತು, ಇದೆ ಮತ್ತು ಮುಂದೆಯೂ ಹಾಗೇ ಉಳಿಯುತ್ತದೆ. ಇದಕ್ಕೆ ವಿರುದ್ಧವಾದ ಯಾವುದೇ ಹೇಳಿಕೆ ಆಧಾರರಹಿತವಾಗಿವೆ. ಐತಿಹಾಸಿಕ ಸಂಗತಿಗಳಿಂದ ದೂರ ಮತ್ತು ಅಸಮಂಜಸವಾಗಿವೆ ಎಂಸದಿದ್ದಾರೆ.
ಪಾಕಿಸ್ತಾನದ ಖಾಲಿ ವಾಕ್ಚಾತುರ್ಯ ಮತ್ತು ಟೊಳ್ಳು ಹಕ್ಕುಗಳ ಪ್ರತಿಪಾದನೆಯು ವಾಸ್ತವವನ್ನು ಬದಲಾಯಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

